ಲೋಕಾಯುಕ್ತ ಬಲೆಗೆ ನಕಲಿ ದಾಖಲೆಯ ಪೊಲೀಸರು
ಬೆಂಗಳೂರು, ಜು.19: ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಪೊಲೀಸ್ ಉದ್ಯೋಗ ಗಿಟ್ಟಿಸಿ ಬಡ್ತಿ ಪಡೆದು ನಿವೃತ್ತಿಯೂ ಆದ ಹಲವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣವನ್ನು ನೀಡಿ ಇವರು ಪೊಲೀಸ್ ಇಲಾಖೆಗೆ ಸೇರಿದ್ದರು. ನಕಲಿ ಜಾತಿ ಪ್ರಮಾಣ ಪತ್ರದ ಜಾಲ ಇನ್ನು ಹಲವು ವಿಭಾಗಗಳಿಗೆ ಹರಡಿರುವ ಶಂಕೆಯನ್ನು ಲೋಕಾಯುಕ್ತ ಪೊಲೀಸರು ವ್ಯಕ್ತಪಡಿಸಿದ್ದಾರೆ.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ(ಡಿಸಿಆರ್ ಇ) ಕಚೇರಿಯಲ್ಲಿ ಈ ರೀತಿಯ ವಿಷಯಕ್ಕೆ ಸಂಬಂಧಿಸಿದಂತೆ 1,500ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ. ಆದರೆ , ಹತ್ತು ಪೊಲೀಸ್ ಅಧಿಕಾರಿಗಳು ಮಾತ್ರ ಸೆರೆಸಿಕ್ಕಿದ್ದಾರೆ. ಆರೋಪ ಹೊತ್ತಿರುವರಲ್ಲಿ ಕೆಲವರು ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ) ಹುದ್ದೆಯಲ್ಲಿದ್ದಾರೆ. ನಾಲ್ವರು ಸೇವೆಯಿಂದ ನಿವೃತ್ತರಾಗಿದ್ದಾರೆ.
ನಿವೃತ್ತ ಡಿವೈಎಸ್ಪಿ ಸಿದ್ದರಾಮಪ್ಪ, ಡಿವೈಎಸ್ಪಿ ಕೆ.ಎಂ.ಮಳಗಲಿ,ನಿವೃತ್ತ ಪೊಲೀಸ್ ಆರಕ್ಷಕ ಜಿ.ಕೊಟ್ರಬಸಪ್ಪ, ಡಿವೈಎಸ್ಪಿ ಪಿ.ಜಿ ಸುದ್ದಿ, ನಿವೃತ್ತ ಎಸ್ಪಿ ಎಂ. ನಾರಾಯಣಪ್ಪ, ಡಿವೈಎಸ್ಪಿ ಜಿ.ಆರ್ ದೇಸಾಯಿ, ನಿವೃತ್ತ ಪೊಲೀಸ್ ಆರಕ್ಷಕ ಮಲ್ಲಿಕಾರ್ಜುನ್ ಲಿಂಗತ್ತಿ, ಆರಕ್ಷಕ ಬಿ.ಎಸ್ ಮಾಲಗತ್ತಿ, ಆರಕ್ಷಕ ರಾಮಚಂದ್ರ ನಾಯಕ್ ಮತ್ತು ಟಿ. ಸಂಜೀವ್ ನಾಯಕ್ ಆರೋಪ ಹೊತ್ತಿರುವ ಅಧಿಕಾರಿಗಳಾಗಿದ್ದಾರೆ.
ಆರೋಪ ಹೊತ್ತ ಅಧಿಕಾರಿಗಳ ಆಸ್ತಿ ಮುಟ್ಟುಗೋಲು ಹಾಕುವುದು ಮತ್ತು ಉದ್ಯೋಗ ಬಡ್ತಿ ತಡೆಯಿಡಿಯುವುದರ ಬಗ್ಗೆ ಸರ್ಕಾರವನ್ನು ನಿರ್ದೇಶನಾಲಯ ಕೋರಿ ದೆ. ಈ ಪ್ರಕರಣವನ್ನು ಬಯಲಿಗೆಳೆದ ಲೋಕಾಯುಕ್ತ ಪೊಲೀಸ್ ಅಧಿಕಾರಿ ಎಸ್. ಪ್ರಕಾಶ್ ಅವರು ಮಾತನಾಡುತ್ತಾ, ಹತ್ತು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ, ಮೀಸಲಾತಿ ಆಧಾರದ ಮೇಲೆ ಹೊಸಬರನ್ನು ನೇಮಿಸಬೇಕು ಎಂದು ಡಿಜಿ ಮತ್ತು ಐಜಿಪಿಗೆ ಶಿಫಾರಸ್ಸು ಮಾಡಲಾಗಿದೆ ಎಂದರು.
(ದಟ್ಸ್ ಕನ್ನಡವಾರ್ತೆ)