ರೈತಪರ, ಜನಪರ ಬಜೆಟ್ಗೆ ಬಿಎಸ್ವೈ ಅಂಕಿತ
ಬೆಂಗಳೂರು, ಜು. 17 : ಇತಿಹಾಸವನ್ನು ಅವಲೋಕಿಸುವುದಾದರೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಆಡಳಿತ ಮಾಡಿದ ಯಾವ ಸರ್ಕಾರಕ್ಕೂ ಈಡೇರಿಸಲು ಸಾಧ್ಯವಾಗಿಲ್ಲ, ಆದ್ದರಿಂದ ಪ್ರಣಾಳಿಕೆಯಲ್ಲಿ ನೀಡಿದ ಪ್ರಮುಖ ಅಂಶಗಳನ್ನು ಮಾತ್ರ ಈಡೇರಿಸಲು ಗಮನ ಹರಿಸಲಾಗಿದೆ ಎಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಜೆಟ್ ಮಂಡನೆಗೂ ಮುನ್ನ ಹೇಳಿದರು.
ಗುರುವಾರ ವಿಧಾನಸೌಧದ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವಲಯಗಳನ್ನು ತೃಪ್ತಿಪಡಿಸುವಂತ ಉತ್ತಮ ಮುಂಗಡಪತ್ರವನ್ನು ಮಂಡಿಸುವುದಾಗಿ ಭರವಸೆ ಕೊಟ್ಟರು. ಕಳೆದ ಎರಡು ಸಲ ನಾನು ಬಜೆಟ್ ಮಂಡಿಸಿರುವೆ, ಆದರೆ ಅಂದು ನಮಗೆ ಪೂರ್ಣ ಸ್ವಾತಂತ್ರ ವಿರಲಿಲ್ಲ. ಆದರೆ ಇಂದಿನ ಪರಿಸ್ಥಿತಿ ಬೇರೆಯಾಗಿದೆ. ನಾವು ಸ್ವತಂತ್ರರು ಯಾರ ಹಂಗೂ ನಮಗಿಲ್ಲ. 50 ವರ್ಷಗಳಲ್ಲಿ ಮಂಡಿಸಿದ ಬಜೆಟ್ ಗಿಂತ ಇಂದಿನ ಬಜೆಟ್ ವಿಭಿನ್ನವಾಗಿರುತ್ತದೆ ಎಂದು ವಿಶ್ವಾಸದಿಂದ ನುಡಿದರು.
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮಾಜಿ ಪ್ರಧಾನಿ ವಾಜಪೇಯಿ ಅವರ ಕನಸು, ಗಾಂಧಿಜೀ ಅವರ ರಾಮರಾಜ್ಯದ ಕಲ್ಪನೆಯನ್ನು ದೃಷ್ಟಿಯಿಲ್ಲಿಟ್ಟುಕೊಂಡು ಆಯವ್ಯಯ ತಯಾರಿಸಲಾಗಿದೆ. ಇದರ ಜತೆಗೆ ಪ್ರತಿಪಕ್ಷದ ಬಹುತೇಕ ಮುಖಂಡರೊಂದಿಗೆ ಚರ್ಚಿಸಿ, ಅವರ ಸಹಕಾರ ಪಡೆದು ಬಜೆಟ್ ರೂಪಿಸಲಾಗಿದೆ. ಇದು ಜನಪರ, ರೈತಪರ ಮುಂಗಡ ಪತ್ರವಾಗಲಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಬರಗಾಲ ಆವರಿಸುವ ಸೂಚನೆಗಳಿವೆ. ಈ ಎಲ್ಲವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶೇಷವಾಗಿ ರೈತರಿಗೆ ಒತ್ತು ನೀಡಲಾಗಿದೆ ಎಂದು ಯಡಿಯೂರಪ್ಪ ಹೇಳಿದರು. ಇಂದು ಮಧ್ಯಾಹ್ನ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ 51ನೇ ಬಜೆಟ್ ಮಂಡಿಸಲಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
ಬಿಎಸ್ವೈ
ಚೊಚ್ಚಲ
ಬಜೆಟ್ಗೆ
ಕ್ಷಣ
ಗಣನೆ