ಕೆಪಿಸಿಸಿ ಅಧ್ಯಕ್ಷ ಗಾದಿಗೆ ಆರ್.ವಿ.ದೇಶಪಾಂಡೆ?
ಬೆಂಗಳೂರು, ಜು. 15 : ಚಿಂತಾಜನಕ ಸ್ಥಿತಿಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಆರ್ .ವಿ.ದೇಶಪಾಂಡೆ ನೇಮಕವಾಗುವ ಸಾಧ್ಯತೆಗಳಿವೆ. ಈ ಸ್ಥಾನದ ಮೇಲೆ ಇನ್ನೊಬ್ಬ ಹಿರಿಯ ನಾಯಕ ಟಿ.ಬಿ.ಜಯಚಂದ್ರ ಆಕಾಂಕ್ಷಿಯಾದರೂ ಕಾಂಗ್ರೆಸ್ ಹೈಕಮಾಂಡ್ ದೇಶಪಾಂಡೆ ಅವರಿಗೆ ಅಧ್ಯಕ್ಷರನ್ನಾಗಿಸಲು ಸಮ್ಮತಿಸಿದೆ ಎನ್ನಲಾಗಿದೆ.
ಮುಂಬರುವ ಲೋಕಸಭೆ ಚುನಾವಣೆ ಮತ್ತು ಬೃಹತ್ ಬೆಂಗಳೂರು ಪಾಲಿಕೆ ಚುನಾವಣೆ ಕೆಲವು ತಿಂಗಳು ಬಾಕಿ ಇರುವುದರಿಂದ ಪಕ್ಷ ಬಲವರ್ಧನೆಗೆ ಸಮರ್ಥ ನಾಯಕನ ಅವಶ್ಯಕತೆ ಇದೆ. ಇದನ್ನು ಮನಗಂಡಿರುವ ಕಾಂಗ್ರೆಸ್ ಹೈಕಮಾಂಡ್ ದೇಶಪಾಂಡೆ ಅವರಿಗೆ ಜವಾಬ್ದಾರಿ ವಹಿಸಲು ಮುಂದಾಗಿದೆ. ಪಕ್ಷದ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಪ್ರತಿಪಕ್ಷದ ನಾಯಕನಾದ ನಂತರ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಪ್ರದೇಶ ಕಾಂಗ್ರೆಸ್ ಸ್ಥಾನ ಮಾತ್ರವಲ್ಲದೇ, ರಾಜ್ಯದ ಘಟಕಗಳಿಗೆ ಪುನಾರಚನೆ ಮಾಡುವ ಇರಾದೆಯನ್ನು ಹೈಕಮಾಂಡ್ ವ್ಯಕ್ತಪಡಿಸಿದೆ. ಜುಲೈ ಅಂತ್ಯದೊಳಗೆ ನೂತನ ಅಧ್ಯಕ್ಷರ ನೇಮಕವಾಗಲಿದೆ ಎಂದು ಕಾಂಗ್ರೆಸ್ ವಲಯದ ಉನ್ನತ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಡಾ.ಪರಮೇಶ್ವರ ಅವರ ಹೆಸರು ಬಲವಾಗಿ ಕೇಳಿ ಬಂದಿತ್ತು. ಆದರೆ ಪಕ್ಷ ಈಗಿರುವ ಸ್ಥಿತಿಯನ್ನು ಕಂಡು ಅವರು ಅಷ್ಟಾಗಿ ಉತ್ಸಾಹ ತೋರಿಸಲಿಲ್ಲ. ಒಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ತಿರುಗೇಟು ನೀಡಲು ಹೈಕಮಾಂಡ್ ನಿರ್ಧರಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಮಾಸಾಂತ್ಯಕ್ಕೆ ಕೆಪಿಸಿಸಿ ನೂತನ ಅಧ್ಯಕ್ಷರ ನೇಮಕ