ರೈತರೇ ಆತ್ಮಹತ್ಯೆಗೆ ಶರಣಾಗಬೇಡಿ : ಸಿಎಂ ಮನವಿ
ಬೆಳಗಾವಿ, ಜು. 12 : ನಗರದಲ್ಲಿ ಸುವರ್ಣ ಕರ್ನಾಟಕ ಸೌಧ ನಿಗದಿ ಮಾಡುವ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ, ತಜ್ಞರೊಡನೆ ಸಮಾಲೋಚಿಸುವ ಉದ್ದೇಶದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ಬೆಳಗಾವಿಗೆ ಆಗಮಿಸಿದರು. ಮೇಯರ್ ಪ್ರಶಾಂತಾ ಬುಡವಿ, ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಮೊದಲಾದವರು ಮುಖ್ಯಮಂತ್ರಿಯನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಸುವರ್ಣ ಕರ್ನಾಟಕ ಸೌಧಕ್ಕೆ ಸ್ಥಳ ನಿಗದಿ ಮಾಡಲು ಜನಪ್ರತಿನಿಧಿಗಳೊಡನೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಯಡಿಯೂರಪ್ಪನವರು, ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿಸಬೇಕೆಂದು ಹಲವಾರು ಮುಖಂಡರು ಸರ್ಕಾರವನ್ನು ಕೋರಿದ್ದಾರೆ. ಈ ಬಗ್ಗೆ ಚಿಂತನೆ ನಡೆದಿದೆ. ಗಡಿಭಾಗದ ಜನತೆಗೆ ಎಂದೂ ದ್ರೋಹವಾಗುವುದಿಲ್ಲ ಎಂದರು.
ಇಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆಯುವುದು ಖಚಿತ. ಶ್ರೀಘ್ರದಲ್ಲೇ ದಿನಾಂಕವನ್ನು ಪ್ರಕಟಣೆ ಮಾಡಲಾಗುವುದು. ರಾಜ್ಯದ ರೈತರಿಗೆ ಮತ್ತೊಮ್ಮೆ ಮನವಿ ಮಾಡುತ್ತೇನೆ 'ರೈತರೇ ಆತ್ಮಹತ್ಯೆಗೆ ಶರಣಾಗಬೇಡಿ'. ಸಮಸ್ಯೆಗೆ ಪರಿಹಾರ ಖಂಡಿತ ಸಿಗುತ್ತದೆ ಎಂದರು. ಅಲ್ಲಿಂದ ಗೋಕಾಕದ ಚಿಕ್ಕನಂದಿಗೆ ತೆರಳಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಸಿಎಂ ಬೆಳಗಾವಿಯನ್ನು ಸಂಜೆ ವೇಳೆಗೆ ಬಿಡುವ ಸಾಧ್ಯತೆಗಳಿವೆ.
ಮೈಸೂರಿಗೆ ಸಿಎಂ
ಭಾನುವಾರ ಬೆಳಗ್ಗೆ ಮೈಸೂರಿಗೆ ಆಗಮಿಸುವ ಯಡಿಯೂರಪ್ಪ ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ನಂತರ 10:30ಕ್ಕೆ ಮೈಸೂರು ವಿವಿಯ ಸೆನೆಟ್ ಹಾಲ್ನಲ್ಲಿ ರೈತ ಮುಖಂಡರೊಡನೆ ಸಮಾಲೋಚನೆ ನಡೆಸಲಿದ್ದಾರೆ. ಮಧ್ಯಾಹ್ನ 1:15ಕ್ಕೆ ಹುಣಸೂರು ರಸ್ತೆಯಲ್ಲಿರುವ ರಾಣಿ ಬಹಾದ್ದೂರ್ ಕ್ರೀಡಾಂಗಣದಲ್ಲಿ ನಡೆಯುವ ಪ್ರೆಸ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 1:45ಕ್ಕೆ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ. ಆಮೇಲೆ ಎಸ್ಡಿಎಂ ಮ್ಯಾನೇಜ್ಮೆಂಟ್ ಆಡಿಟೋರಿಯಂನಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ ನಾಲ್ಕರ ನಂತರ ಸ್ಥಳೀಯ ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿ ನಂತರ ಬೆಂಗಳೂರಿಗೆ ವಾಪಾಸ್ಸಾಗಲಿದ್ದಾರೆ.
(ದಟ್ಸ್ ಕನ್ನಡವಾರ್ತೆ)