ಪ್ರಧಾನಿ ಮಂತ್ರಿಗೆ ರಾಜ್ಯದ ಸಮಸ್ಯೆಗಳ ಮನವರಿಕೆ: ಖರ್ಗೆ
ನವದೆಹಲಿ, ಜು. 6 :ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ 21 ಜನರಕಾಂಗ್ರೆಸ್ ನಿಯೋಗ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭಾನುವಾರ ಮಧ್ಯಾಹ್ನ ಭೇಟಿ ಮಾಡಿತು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಹಾಗೂ ರಾಜ್ಯದ ಉಸ್ತುವಾರಿ ವಹಿಸಿಕೊಂಡಿರುವ ಪೃಥ್ವಿರಾಜ್ ಚೌಹಾನ್ ಕೂಡ ನಿಯೋಗದೊಡನೆ ಪ್ರಧಾನಿ ಅವರನ್ನು ಭೇಟಿ ಮಾಡಿದರು.
ರೈತರ ಸಮಸ್ಯೆ, ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿ, ಕಾವೇರಿ ನೀರಿನ ಸಮಸ್ಯೆ, ಮುಂತಾದ ಪ್ರಮುಖ ಸಮಸ್ಯೆಗಳ ಬಗ್ಗೆ ಪ್ರಧಾನಿ ಅವರೊಡನೆ ಚರ್ಚಿಸಲಾಯಿತು. ಸೂಕ್ತ ರೀತಿಯಲ್ಲಿ ಪರಿಹಾರ ನೀಡುವ ಭರವಸೆಯನ್ನು ಪ್ರಧಾನಿ ಅವರು ನೀಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಸುದ್ದಿಗಾರರಿಗೆ ತಿಳಿಸಿದರು. ಸಂಜೆ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಅವರನ್ನು ನಿಯೋಗ ಭೇಟಿ ಮಾಡಲಿದೆ.
ಕಾಂಗ್ರೆಸ್ಸಿನ ನಿಯೋಗದಲ್ಲಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಎಂ.ಪಿ. ಪ್ರಕಾಶ್, ಸಂಸದ ಎನ್.ವೈ. ಹನುಮಂತಪ್ಪ ಹಾಗೂ ನರಸಿಂಹರಾವ್ ಸೂರ್ಯವಂಶಿ, ಡಿ.ಬಿ. ಚಂದ್ರೇಗೌಡ, ದಿನೇಶ್ ಗುಂಡೂರಾವ್, ವೀರಣ್ಣ ಮತ್ತಿಕಟ್ಟಿ, ಐ.ಜಿ .ಸನದಿ, ವಿ.ಎಸ್. ಉಗ್ರಪ್ಪ, ಕೆ.ಸಿ. ಕೊಂಡಯ್ಯ, ವಿ.ಆರ್.ಸುದರ್ಶನ್, ಟಿ.ಬಿ.ಜಯಚಂದ್ರ, ಡಿ.ಕೆ.ಶಿವಕುಮಾರ್, ಮಲ್ಲಜಮ್ಮ, ರಾಮಚಂದ್ರಪ್ಪ, ಕಾಗೋಡು ತಿಮ್ಮಪ್ಪ, ಹೆಚ್. ಸಿ.ಶ್ರೀಕಂಠಯ್ಯ ಹಾಗೂ ಅನಿಲ್ ಲಾಡ್ ಸೇರಿದ್ದರು.
ಬಿಜೆಪಿಗೆ ಶಾಪ: ರಾಜ್ಯದಲ್ಲಿನ ಇತ್ತೀಚಿನ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿದ ಡಿ.ಬಿ.ಚಂದ್ರೇಗೌಡ, ದಿನೇಶ್ ಗುಂಡೂರಾವ್, ಎಂ.ಪಿ.ಪ್ರಕಾಶ್ ಹಾಗೂ ಡಿ.ಕೆ. ಶಿವಕುಮಾರ್ ಅವರು ಬಿಜೆಪಿಯನ್ನು ಹಿಗ್ಗಾ ಮುಗ್ಗಾ ಬೈದಾಡಿದರು. ಇದು ರಾಜಕೀಯ ವ್ಯಭಿಚಾರ, ಹಣದಿಂದ ಶಾಸಕರನ್ನು ಕೊಂಡುಕೊಂಡಿದ್ದಾರೆ.ಬಿಜೆಪಿ ಸ್ಥಿರವಾಗಿಲ್ಲ. ಹಾಗಾಗಿ ಈ ನಾಟಕ. ಇದೆಲ್ಲಾ ಪೂರ್ವ ನಿಯೋಜಿತ ಕಾರ್ಯಾಚರಣೆ ಎಂದೆಲ್ಲಾ ಹೇಳಿದರು.
(ದಟ್ಸ್ ಕನ್ನಡವಾರ್ತೆ)