ವೇಗ ನಿಯಂತ್ರಕ ಕಾನೂನು ಅವೈಜ್ಞಾನಿಕ : ಅಶೋಕ್
ಬೆಂಗಳೂರು, ಜು. 3 : ಸರಕು ಸಾಗಣೆ ವಾಹನಗಳಿಗೆ ವೇಗ ನಿಯಂತ್ರಕವನ್ನು ಅಳವಡಿಸುವುದರಿಂದ ಯಾವುದೇ ಪ್ರಯೋಜನವಿಲ್ಲ, ಅದೊಂದು ಅವೈಜ್ಞಾನಿಕ ಕ್ರಮ. ಅದರ ಬದಲು ಸಾರಿಗೆ ಕಾನೂನನ್ನೇ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಸಾರಿಗೆ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕು ಸಾಗಣಿಕೆ ವಾಹನಗಳ ವೇಗವನ್ನು ಗಂಟೆಗೆ 65 ಕಿ.ಮೀ.ಗೆ ನಿಗದಿಪಡಿಸುವ ಕಾನೂನು ಹಳತಾಗಿದೆ. ವೇಗ ನಿಯಂತ್ರಕವನ್ನು ಅಳವಡಿಕೆಯನ್ನು ನಿಭಾಯಿಸುವುದು ಸಾರಿಗೆ ಇಲಾಖೆಗೆ ಕಷ್ಟಕರವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಇದೀಗ ಉತ್ತಮ ತಾಂತ್ರಿಕತೆ ಹೊಂದಿರುವ ವಾಹನಗಳು ಲಭ್ಯವಿವೆ. ಹೆದ್ದಾರಿಗಳ ಗುಣಮಟ್ಟ ಕೂಡಾ ಚೆನ್ನಾಗಿದೆ. ಹೀಗಿರುವಾಗ ವೇಗ ನಿಯಂತ್ರಕದ ಅವಶ್ಯಕತೆ ಬರುವುದೇ ಇಲ್ಲಾ. ನಾವು ರಚಿಸುವ ಕಾನೂನು ವಾಹನಗಳ ಉತ್ತಮ ನಿರ್ವಹಣೆಗೆ ದಾರಿ ಮಾಡಿಕೊಡಬೇಕು, ನಿರ್ವಹಣೆಯನ್ನು ಹತ್ತಿಕ್ಕುವುದಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಇತ್ತೀಚೆಗೆ ರಾಜ್ಯ ಹೈಕೋರ್ಟ್ ವೇಗ ನಿಯಂತ್ರಕ ಕಡ್ಡಾಯಗೊಳಿವಂತೆ ನೀಡಿದ ತೀರ್ಪು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲಾರಿ ಮಾಲೀಕರ ಸಂಘ ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದೆ. ಲಾರಿ ಮಾಲೀಕರು ಶೀಘ್ರದಲ್ಲಿ ತಮ್ಮ ಮುಷ್ಕರವನ್ನು ನಿಲ್ಲಿಸಿ ಮಾತುಕತೆಗೆ ಬಂದರೆ ಪ್ರಮಾಣಿಕವಾಗಿ ಅವರ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನವನ್ನು ಸರ್ಕಾರ ಮಾಡಲಿದೆ ಎಂದು ಅಶೋಕ್ ಹೇಳಿದರು.
ವೇಗ ನಿಯಂತ್ರಕ ಅಳವಡಿಕೆ ಕುರಿತು ಮತ್ತು ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ ಕುರಿತು ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
(ದಟ್ಸ್ಕನ್ನಡ ವಾರ್ತೆ)
ಪೂರಕ
ಓದಿಗೆ
ವೇಗ
ನಿಯಂತ್ರಕ
ಕಡ್ಡಾಯ:
ರಾಜ್ಯ
ಹೈಕೋರ್ಟ್
ಆದೇಶ