ರಾಜ್ಯದಲ್ಲಿ ಮತ್ತಷ್ಟು ನೂತನ ವಿಮಾನ ನಿಲ್ದಾಣಗಳು
ನವದೆಹಲಿ, ಜು.3: ಕರ್ನಾಟಕದಲ್ಲಿ ನೂತನ ವಿಮಾನ ನಿಲ್ದಾಣಗಳು ಸ್ಥಾಪನೆಯಾಗಲಿದ್ದು ಮುಂಬರುವ ಎರಡು ವರ್ಷಗಳಲ್ಲಿ ವಿಮಾನಯಾನಕ್ಕೆ ಉತ್ತಮ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ತಿಳಿಸಿದರು.
ನೂತನ ವಿಮಾನ ನಿಲ್ದಾಣಗಳ ನಿರ್ಮಾಣದ ಜೊತೆಗೆ ಅವಶ್ಯಕತೆ ಇರುವ ಕಡೆ ವಿಮಾನ ನಿಲುಗಡೆ ಸ್ಥಳಗಳನ್ನು (airstrips) ಸರ್ಕಾರ ನಿರ್ಮಿಸಲಿದೆ ಎಂದು ಅವರು ನವದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಈಗಾಗಲೆ ಶಿವಮೊಗ್ಗ, ಹಾಸನ ಮತ್ತು ಗುಲ್ಬರ್ಗ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿದ್ದು ರಾಜ್ಯದಲ್ಲಿ ಮತ್ತಷ್ಟು ವಿಮಾನ ನಿಲ್ದಾಣಗಳ ಅವಶ್ಯಕತೆ ಇದ್ದು ಅವನ್ನು ಶೀಘ್ರ ನಿರ್ಮಿಸಲಾಗುತ್ತದೆ ಎಂದು ಅವರು ಭರವಸೆ ನೀಡಿದರು.
ಬಿಜಾಪುರದಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲು ಈಗಾಗಲೆ ಟೆಂಡರ್ ಕರೆಯಲಾಗಿದೆ ಹಾಗೆಯೇ ಬೀದರ್ ವಾಯುಪಡೆಯ ವಿಮಾನ ನಿಲ್ದಾಣವನ್ನು ಬದಲಾಯಿಸಿ ನಾಗರೀಕ ಬಳಕೆಗೆ ಉಪಯೋಗಿಸಲಾಗುತ್ತದೆ. ಹುಬ್ಬಳ್ಳಿ, ಮಂಗಳೂರು ಮತ್ತು ಮೈಸೂರು ವಿಮಾನ ನಿಲ್ದಾಣಗಳನ್ನು ಉನ್ನತದರ್ಜೆಗೆ ಏರಿಸಲಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು.
(ಏಜೆನ್ಸೀಸ್)