ಬಜೆಟ್ ನಂತರ ಸಂಪುಟ ವಿಸ್ತರಣೆಗೆ ಶಸ್ತ್ರಚಿಕಿತ್ಸೆ!
ಬೆಂಗಳೂರು, ಜೂ. 30 : ರಾಜ್ಯ ಮುಂಗಡ ಪತ್ರ ಮಂಡನೆಯ ನಂತರ ಸಂಪುಟ ವಿಸ್ತರಣೆ ಹಾಗೂ ಕೆಲ ಸಚಿವರ ಖಾತೆಗಳನ್ನು ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಪಕ್ಷೇತರರೂ ಸೇರಿದಂತೆ ಕೆಲ ಹಿರಿಯ ಸಚಿವರು ಹಾಗೂ ಶಾಸಕರ ಬೇಡಿಕೆಗೆ ಮಣಿದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಚಿಂತನೆ ನಡೆಸಿದ್ದಾರೆ.
ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎರಡು ಜನಪ್ರಿಯ ಬಜೆಟ್ಗಳನ್ನು ಮಂಡಿಸಿದ ಅನುಭವ ಇರುವ ಯಡಿಯೂರಪ್ಪ ಜು. 17ರಂದು ಮಂಡಿಸಲಾಗುವ ಮುಂಗಡ ಪತ್ರದ ಸಿದ್ಧತೆಯಲ್ಲಿದ್ದಾರೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿ ಪಕ್ಷಕ್ಕೆ ಮತ್ತೊಂದು ಜನಪರ ಮುಂಗಡಪತ್ರ ಮಂಡಿಸಬೇಕಾದ ಅನಿವಾರ್ಯತೆ ಇದೆ. ಜತೆಗೆ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಬಿಜೆಪಿ ಪಾಲಿಗೆ ಈ ಬಜೆಟ್ ಸತ್ವ ಪರೀಕ್ಷೆಯಾಗಲಿದೆ. ಹಾಗಾಗಿ ಬಜೆಟ್ ಮಂಡನೆ ನಂತರ ಸಂಪುಟ ವಿಸ್ತರಣೆ, ಖಾತೆ ಬದಲಾವಣೆಗೆ ಯಡಿಯೂರಪ್ಪ ಮುಂದಾಗಲಿದ್ದಾರೆ ಎನ್ನಲಾಗಿದೆ.
ಬಜೆಟ್ ಮಂಡನೆಗೂ ಮುನ್ನ ಖಾತೆ ಬದಲಾವಣೆ ಮತ್ತು ಸಂಪುಟ ವಿಸ್ತರಣೆಗೆ ಕೈಹಾಕಿದರೆ ಸರ್ಕಾರದಲ್ಲಿ ಅಸಮಾಧಾನಕ್ಕೆ ಕಾರಣವಾಗಿ ಭಿನ್ನಮತ ಸ್ಪೋಟಗೊಳ್ಳಬಹುದು. ಈ ಎಲ್ಲದರ ಸಮಗ್ರ ಚಿಂತನೆ ನಡೆಸಿರುವ ಯಡಿಯೂರಪ್ಪ ಬಜೆಟ್ ನಂತರ ಸಂಪುಟ ವಿಸ್ತರಣೆಯ ಹುತ್ತಕ್ಕೆ ಕೈಹಾಕಲಿದ್ದಾರೆ. ಅಸಮಾಧಾನ ಹೊಂದಿರುವ ಪಕ್ಷೇತರ ಸಚಿವರಿಗೆ ಮುಖ್ಯಮಂತ್ರಿಯವರು ತಮ್ಮ ಬಳಿ ಇಟ್ಟುಕೊಂಡಿರುವ ಖಾತೆಗಳಲ್ಲಿ ಒಂದನ್ನು ನೀಡುವ ನಿರೀಕ್ಷೆಗಳಿವೆ. ಹಣಕಾಸು, ಬೆಂಗಳೂರು ನಗರಾಭಿವೃದ್ಧಿ, ಗುಪ್ತಚರ ಇಲಾಖೆಗಳನ್ನು ತಮ್ಮ ಬಳಿ ಇಟ್ಟು ಕೊಂಡು ಉಳಿದ ಗಣಿ , ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಖಾತೆಗಳನ್ನು ಯಡಿಯೂರಪ್ಪ ಹಂಚುವ ಸಾಧ್ಯತೆಗಳಿವೆ.
(ದಟ್ಸ್ ಕನ್ನಡ ವಾರ್ತೆ)