ಆಗ್ನೇಯ ಪದವೀಧರ ಕ್ಷೇತ್ರ ಕೂಡ ಬಿಜೆಪಿ ಪಾಲು
ದಾವಣಗೆರೆ, ಜೂ. 29: ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ಸಾಧ್ಯತೆ ಎಂದು ಪರಿಗಣಿಸಲಾಗಿದ್ದ ಆಗ್ನೇಯ ಪದವೀಧರರಕ್ಷೇತ್ರ ಕೂಡ ಬಿಜೆಪಿ ಪಾಲಾಗಿದೆ. ಈ ಕ್ಷೇತ್ರದ ಮತ ಎಣಿಕೆ ಕಾರ್ಯ ಶನಿವಾರ ತಡರಾತ್ರಿಯ ನಂತರ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿಯ ಡಾ.ಎ.ಎಚ್. ಶಿವಯೋಗಿಸ್ವಾಮಿ ಜಯಭೇರಿ ಬಾರಿಸಿದ್ದಾರೆ.
ಕಳೆದ ಸಲ ಸದಸ್ಯರಾಗಿ ಕೆಲಸ ನಿರ್ವಹಿಸಿದ ಎಚ್.ಸಿ.ಶಿವಶಂಕರ ಮತ್ತು ಬಿಜೆಪಿ ಎ.ಎಚ್.ಶಿವಯೋಗಿಸ್ವಾಮಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ವಿಧಾನ ಪರಿಷತ್ ಸದಸ್ಯರಾಗಿ ಶಿವಶಂಕರ ಉತ್ತಮ ಕೆಲಸಗಾರ ಹೆಸರು ಗಳಿಸಿದ್ದು, ಮತದಾರರು ಒಲವು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿತ್ತು.ಆದರೆ ಮೊದಲ ಪ್ರಾಶಸ್ತ್ಯ ಮತಗಳ ಎಣಿಕೆಯಲ್ಲಿ 6965ಮತಗಳಿಂದ ಹಿಂದುಳಿದಿದ್ದ ಶಿವಶಂಕರ್ ಕೊನೆಗೆ ಶಿವಯೋಗಿಸ್ವಾಮಿ ಅವರ ವಿರುದ್ಧ ಸೋಲುಂಡಿದ್ದಾರೆ.
ಐದು ಕ್ಷೇತ್ರಗಳ ಪೈಕಿ ನಾಲ್ಕು ಕಡೆ ಮೊದಲ ಹಂತದಪ್ರಾಶಸ್ತ್ಯ ಮತಗಳ ಎಣಿಕೆಯಲ್ಲೇ ಎಲ್ಲರೂ ಗೆಲುವು ಸಾಧಿಸಿದ್ದಾರೆ. ಆದರೆ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ನಿಗದಿತ ಶೇ. 50 ಕ್ಕೂ ಹೆಚ್ಚು ಮತ ಪಡೆಯದ ಕಾರಣ ಇನ್ನೊಂದು ಸುತ್ತಿನ ಮತ ಎಣಿಕೆ ಮಾಡಲಾಯಿತು. ಆಗ್ನೇಯಎರಡನೇ ಪ್ರಾಶಸ್ತ್ಯ ಮತಗಳ ಎಣಿಕೆಯಲ್ಲಿ ಶಿವಯೋಗಿಸ್ವಾಮಿ ಅವರಿಗೆ 14293, ಶಿವಶಂಕರ್ ಅವರಿಗೆ 7328, ಕಾಂಗ್ರೆಸ್ ನ ಲೋಕೇಶ್ವರಪ್ಪ ಅವರಿಗೆ 3234, ಪಕ್ಷೇತರ ಚೌಡರೆಡ್ಡಿ ಅವರಿಗೆ 5468, ಮಲ್ಲಿಕಾರ್ಜುನಯ್ಯ ಅವರಿಗೆ 4274 ಹಾಗೂ ವಸಂತಕುಮಾರ್ ಅವರಿಗೆ 2095ಮತಗಳು ಬಂದಿದ್ದವು.
(ದಟ್ಸ್ ಕನ್ನಡವಾರ್ತೆ)