ಮತ್ತೆ ಹೆಚ್ಚಿದ ಹಣದುಬ್ಬರ ಪ್ರಮಾಣ ಶೇ.11.42 ಏರಿಕೆ
ಬೆಂಗಳೂರು, ಜೂ. 27 : ಕಳೆದ ವಾರ ತೈಲ ಬೆಲೆ ಹೆಚ್ಚಳದಿಂದ ಶೇ. 11.05ಕ್ಕೆ ತಲುಪಿದ್ದ ಹಣದುಬ್ಬರ, ಇದೀಗ ಮತ್ತೆ ತನ್ನ ಅಬ್ಬರವನ್ನು ಮುಂದುವರೆಸಿದ್ದು, 13 ವರ್ಷಗಳಲ್ಲಿ ದಾಖಲೆ ಎನ್ನುವಂತಹ ಶೇ. 11.42 ಕ್ಕೆ ಏರಿದೆ. ಈ ಮೂಲಕ ಹಣದುಬ್ಬರ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ.
ಜೂ. 4ಕ್ಕೆ ಕೊನೆಗೊಂಡ ವಾರದಲ್ಲಿ ಶೇ.8.75ಕ್ಕೆ ಏರಿಕೆಯಾಗಿತ್ತು. ನಂತರ ಜೂನ್ ವಾರದಲ್ಲಿ ಮತ್ತೆ ಏರಿಕೆ ಕಂಡು ಶೇ.11.05ಕ್ಕೆ ಬಂದು ತಲುಪಿತ್ತು. ಇದೀಗ ಜೂ 14 ನೇ ವಾರದಲ್ಲಿ ಮತ್ತೆ ತನ್ನ ಚಿನ್ನಾಟವನ್ನು ಮುಂದುವರೆಸಿದ್ದು, ಶೇ.11.42ರಷ್ಟಾಗಿದೆ. ಈ ಮೂಲಕ ಎಲ್ಲ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಜನಸಾಮಾನ್ಯರ ಸ್ಥಿತಿ ಹೇಳತೀರದಾಗಿದೆ. ಹಣದುಬ್ಬರ ನಿಯಂತ್ರಣಕ್ಕೆ ಆರ್ಥಿಕ ಸಚಿವಾಲಯ ಮತ್ತು ರಿಸರ್ವ್ ಬ್ಯಾಂಕ್ ಕೈಗೊಂಡಿರುವ ಅನೇಕ ಕಾರ್ಯಕ್ರಮಗಳು ಯಾವುದೇ ಪ್ರಭಾವ ಬೀರಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಹುಣದುಬ್ಬರದ ದರ ಪ್ರಕಟವಾದ ಬೆನ್ನ ಹಿಂದೆಯೇ ಷೇರು ಪೇಟೆ ಕುಸಿದು ಬಿದ್ದಿತ್ತು.
1995 ಮೇ 6 ರಂದು ಹಣದುಬ್ಬರದ ದರ ಶೇ.11.11 ಈ ವರೆಗಿನ ದಾಖಲೆಯ ಪ್ರಮಾಣವಾಗಿತ್ತು. ಈಗ ಅದನ್ನೂ ಮೀರಿ ಶೇ.11.43 ಆಗಿರುವುದು ಐತಿಹಾಸಿಕ ದಾಖಲೆಯಾಗಿದೆ. ಕಾಕತಾಳೀಯವೆಂಬಂತೆ ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿದ್ದರು. ಹಾಲಿ ಹಣಕಾಸು ಸಚಿವ ಪಿ.ಚಿದಂಬರಂ ವಾಣಿಜ್ಯ ಸಚಿವರಾಗಿದ್ದರು.
ಹಣದುಬ್ಬರ ನಿಯಂತ್ರಿಸಲು ರಿಸರ್ವ್ ಬ್ಯಾಂಕಿನ ಹಣಕಾಸು ನೀತಿಯನ್ನು ಇನ್ನಷ್ಟು ಬಿಗಿಗೊಳಿಸಬೇಕು ಎನ್ನುವುದು ಆರ್ಥಿಕ ತಜ್ಞರ ಅಭಿಮತ. ಹಾಗೇನಾದರೂ ಮಾಡಿದಲ್ಲಿ ಬ್ಯಾಂಕ್ ಗಳ ಅಲ್ಪಕಾಲೀನ ಸಾಲವೂ ಮತ್ತಷ್ಟು ತುಟ್ಟಿಯಾಗುವ ಸಂಭವವಿದೆ. ಹಣದುಬ್ಬರದ ಅನಿಯಮಿತ ಏರಿಕೆಯಿಂದಾಗಿ ಕಾರು, ಮನೆ, ವೈಯಕ್ತಿಕ ಸಾಲ ತುಟ್ಟಿಯಾಗಲಿವೆ. ಹೊಸ ಸಾಲ ಸುಲಭವಾಗಿ ಸಿಗುವುದಿಲ್ಲ. ವೇತನ ಕಡಿಮೆ, ನಿತ್ಯ ವಸ್ತುಗಳ ಬೆಲೆ ಗಗನಕ್ಕೆ, ಉದ್ಯೋಗಾವಕಾಶಗಳು ಕಡಿಮೆ, ಪ್ರವಾಸ ಪ್ರಯಾಣ ದುಬಾರಿ, ಆಮದು ತುಟ್ಟಿ, ರಪ್ತು ಕಷ್ಟ, ಠೇವಣಿಗಳಿಗೆ ಬೆಲೆ ಇಲ್ಲದಂತಾಗಲಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಹಣದುಬ್ಬರ ಹುಚ್ಚು ಕುದುರೆಯಂತೆ ಓಡುತ್ತಿರುವುದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
(ದಟ್ಸ್ ಕನ್ನಡ ವಾರ್ತೆ)