ಸಿಂದಗಿಯ ರಾಮಪುರ ಬಳಿ ಶೂಟೌಟ್ ಇಬ್ಬರ ಸಾವು
ವಿಜಾಪುರ, ಜೂ. 11: ಭೀಮಾತೀರದ ಬಯಲಿನಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು, ಸಿಂದಗಿಯಿಂದ ಆಲಮೇಲಾದ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ರಾಮಪುರ ಬಳಿ ಇನ್ನೊಂದು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮನ ಬಂದಂತೆ ಗುಂಡಿನ ಸುರಿಮಳೆಗೈದಿದ್ದರಿಂದ ಸ್ಥಳದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ತೀವ್ರ ಚಿಂತಾಜನಕ ಸ್ಥಿತಿಯಲ್ಲಿದ್ದ ಇನ್ನೊಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಪರಶುರಾಮ ಮೃತಪಟ್ಟ ವ್ಯಕ್ತಿ. ಭೀಮಾತೀರದ ಹಂತಕರಲ್ಲಿ ಒಬ್ಬನಾದ ಭಾಗಪ್ಪ ಹರಿಜನನ ಅಳಿಯ ಈ ಪರಶುರಾಮ. ಘಟನೆಗೆ ಹಳೆಯ ದ್ವೇಷ ಕಾರಣ ಎನ್ನಲಾಗಿದೆ. ಪರಶುರಾಮ ಮತ್ತು ಆತನ ಗೆಳೆಯ ಇಂದು ಬೆಳಗ್ಗೆ ಸಿಂದಗಿಯಿಂದ ಆಲಮೇಲಾದ ಕಡೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ರಾಮಪುರ ಗ್ರಾಮದ ಬಳಿ ಇಬ್ಬರು ದುಷ್ಕರ್ಮಿಗಳು ಬೈಕ್ ನಲ್ಲಿ ಬಂದು ಏಕಾಏಕಿ ಮನ ಬಂದಂತೆ ಗುಂಡಿನ ಸುರಿಮಳೆಗೈದಿದ್ದಾರೆ.
ಪರಶುರಾಮನ ದೇಹದೊಳಗೆ ಅನಾಮತ್ತು ಎಂಟು ಗುಂಡು ಸೇರಿಕೊಂಡಿದ್ದರಿಂದ ಸ್ಥಳದಲ್ಲಿಯೇ ಆತ ಮೃತಪಟ್ಟಿದ್ದಾನೆ. ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿತ್ತು. ತಕ್ಷಣ ವಿಜಾಪುರ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತಾದರೂ , ಯಾವುದೇ ಪ್ರಯೋಜನವಾಗಲಿಲ್ಲ. ಈತನ ದೇಹದೊಳಗೆ ಆರು ಗುಂಡುಗಳ ಸೇರಿಕೊಂಡಿದ್ದವು.
ಭಾಗಪ್ಪ ಹರಿಜನ ಭೀಮಾತೀರದ ಹಂತಕರಲ್ಲಿ ಪ್ರಮುಖ ಹೆಸರು. ಈಗ್ಗೆ ಕೆಲ ದಿನಗಳ ಹಿಂದೆ ಹತ್ಯೆ ಪ್ರಯತ್ನ ಆರೋಪದಲ್ಲಿ ಆವನು ಜೈಲು ಪಾಲಾಗಿದ್ದ. ಈ ಸೇಡಿನ ಹಿನ್ನಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣವನ್ನು ಸಿಂದಗಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ. ತನಿಖೆ ಕೈಗೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)