ನೈಸರ್ಗಿಕ ವಿಕೋಪಗಳ ತಡೆಯಲು ಎರಡು ಕೋಟಿ ನಿಧಿ
ಮಂಗಳೂರು, ಜೂ. 9 : ಜಿಲ್ಲೆಯಾದ್ಯಂತ ಕಡಲ ಕೊರೆತ ಮತ್ತು ರಾಷ್ಟ್ರೀಯ ವಿಕೋಪಗಳಿಂದ ತಪ್ಪಿಸಿಕೊಳ್ಳಲು ಮುಂಜಾಗ್ರತಾ ಕ್ರಮಗಳಿಗಾಗಿ ರಾಜ್ಯ ಸರ್ಕಾರ 2 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ ಎಂದು ಬಂದರು ಮತ್ತು ಸಣ್ಣ ಉಳಿತಾಯ ಸಚಿವ ಕೃಷ್ಣ ಪಾಲೇಮಾರ್ ಘೋಷಿಸಿದ್ದಾರೆ.
ಭಾನುವಾರ ಕಡಲ ಕೊರೆತಕ್ಕೆ ಒಳಗಾಗಿರುವ ಉಲ್ಲಾಳದ ಮೊಗವೀರಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನೀಡಿರುವ ಹಣವನ್ನು ಕಡಲ ಕೊರತೆಕ್ಕೆ ಒಳಗಾಗಿರುವ ಪ್ರದೇಶಗಳಿಗೆ ಬಳಸಲು ಸೂಚನೆ ನೀಡಲಾಗಿದೆ ಎಂದರು. ನೈಸರ್ಗಿಕ ಮುನಿಸಿನಿಂದ ಹಾನಿಗೊಳಗಾದ ಜನರಿಗೆ ಸೂಕ್ತ ಪರಿಹಾರ ನೀಡುವುದರ ಕುರಿತು ಸೋಮವಾರ ಜಿಲ್ಲಾಧಿಕಾರಿಗಳೊಂದಿಗೆ ಸಭೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ಕಡಲಕೊರೆತದಿಂದ ತಪ್ಪಿಸಿಕೊಳ್ಳಲು ಸಮುದ್ರದ ದಂಡೆಗೆ ಗೋಡೆ ಕಟ್ಟಲು ಚಿಂತನೆ ನಡೆಸಲಾಗಿದ್ದು, ಶೀಘ್ರದಲ್ಲಿ ಈ ಕಾಮಗಾರಿಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದರು. ಆದರೆ ಮಂಗಳೂರು ಬಂದರು ಸೇರಿದಂತೆ ಇತರಡೆಗೆ ದೇಶಿಯ ತಂತ್ರಜ್ಞಾನವನ್ನು ಉಪಯೋಗಿಸಿ ಗೋಡೆಯನ್ನು ನಿರ್ಮಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಮಂಗಳೂರು ಜಿಲ್ಲೆ ಪದೇಪದೇ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುತ್ತಿದ್ದು, ಸಂತ್ರಸ್ಥರ ಸಹಾಯಕ್ಕೆ ಸಹಾಯವಾಣೆಯನ್ನು ಕೇಂದ್ರವನ್ನು ತೆರೆಯಲಾಗುವುದು ಎಂದು ಹೇಳಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ.ಸದಾನಂದಗೌಡ ಮಾತನಾಡಿ, ಸಮುದ್ರ ದಂಡೆಗೆ ಗೋಡೆ ಕಟ್ಟುವ ಕುರಿತು ರಾಜ್ಯದ ನಿಯೋಗದೊಂದಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಮಹೇಶ್ವರ ರಾವ್, ಶಾಸಕ ಪದ್ಮನಾಭ್ ಕೊಠಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಮೋನಪ್ಪ ಬಂಡಾರಿ ಮತ್ತಿತರರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)