ಧಾರವಾಡದಲ್ಲಿ ಹಿಂಸಾರೂಪ ತಾಳಿದ ರೈತರ ಪ್ರತಿಭಟನೆ
ಧಾರವಾಡ, ಜೂ. 9 : ರಸಗೊಬ್ಬರ ಕೊರತೆಯ ಹಿನ್ನಲೆಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾ ನಿರತ ರೈತರು ಆಕ್ರೋಶಗೊಂಡು ಮೂರು ಬಸ್ಸುಗಳು ಬೆಂಕಿ ಹಚ್ಚಿದ್ದಾರೆ. ರೈತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, 20 ಸುತ್ತು ಅಶ್ರುವಾಯು ಸಿಡಿಸಿದ್ದಾರೆ. ನಗರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ರಸಗೊಬ್ಬರ ಕೊರತೆಯಿಂದ ಆಕ್ರೋಶಗೊಂಡ ರೈತರು ಸೋಮವಾರ ನಗರದ ರೀಗಲ್ ಚಿತ್ರಮಂದಿರ ಹತ್ತಿರ ಉಗ್ರ ಪ್ರತಿಭಟನೆಗೆ ಇಳಿದರು. ರೈತರಿಗೆ ಸಮಯಕ್ಕೆ ಸರಿಯಾಗಿ ರಸಗೊಬ್ಬರ ಒದಗಿಸುವುದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರ ಅನೇಕ ಕಣ್ಣು ಮುಚ್ಚಿ ಕುಳಿತಿದೆ. ಅನೇಕ ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಗೂ ಜಿಲ್ಲಾಡಳಿತ ಸೂಕ್ತವಾಗಿ ಸ್ಪಂದಿಸಿಲ್ಲ. ಈ ಕಾರಣದಿಂದ ಪ್ರತಿಭಟನೆ ತೀವ್ರಗೊಂಡಿದೆ. ಹಳೆ ಬಸ್ ನಿಲ್ದಾಣ ಮತ್ತು ಜೂಬಿಲಿ ವೃತ್ತದಲ್ಲಿ ಕೂಡಾ ತ್ವೇಷಮಯ ವಾತಾವರಣ ಉಂಟಾಗಿತ್ತು.
ಖಾಸಗಿ ಆಗ್ರೋ ಕೇಂದ್ರಗಳ ಮಾಲೀಕರು ಕೃತಕ ಆಭಾವ ಸೃಷ್ಟಿಸಿದ್ದಾರೆ ಎಂದು ರೊಚ್ಚಿಗೆದ್ದ ರೈತರ ಸಮೂಹ ಗೊಬ್ಬರ ಅಂಗಡಿಗಳನ್ನು ನಾಶಮಾಡಲು ಪ್ರಯತ್ನಿಸಿದರು. ಇನ್ನ ಕೆಲ ಕಡೆಗೆ ಅಂಗಡಿಗಳಿಗೆ ನುಗ್ಗಿ ಸಂಪೂರ್ಣ ನಾಶ ಮಾಡಿದರು. ಮೂರು ಸರ್ಕಾರಿ ಬಸ್ಸುಗಳಿಗೆ ಬೆಂಕಿ ಹಚ್ಚಲಾಯಿತು. ಕಲ್ಲು ತೂರಾಟ ಸಹ ಮಾಡಿದ್ದಾರೆ.
ಮಾತಿನ ಚಕಮಕಿ - ರೈತರ ಪ್ರತಿಭಟನೆಯನ್ನು ಪೊಲೀಸರು ತಡೆಯಲು ಮುಂದಾದಾಗ ರೈತರು ಮತ್ತು ಪೊಲೀಸರ ನಡುವೆ ತೀವ್ರವಾಗ ವಾಗ್ವಾದ ನಡೆಯಿತು. ಇದರಿಂದ ಮತ್ತಷ್ಟು ಕ್ರೋಧಗೊಂಡ ರೈತರು, ಪೊಲೀಸ ಇಲಾಖೆ ವಾಹನಕ್ಕೆ ಬೆಂಕಿ ಹಚ್ಚಲಾಯಿತು. ಈ ಸಂದರ್ಭದಲ್ಲಿ ಒಬ್ಬ ಪೊಲೀಸ್ ಪೇದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. 20 ಸುತ್ತು ಅಶ್ರುವಾಯು ಸಿಡಿತವನ್ನು ನಡೆಸಿದ್ದಾರೆ.
ಸುಮ್ಮನೇ ಕುಳಿತ ಸರ್ಕಾರ: ನಗರದಲ್ಲಿ ರೈತರ ಸಮಸ್ಯೆ ಮುಗಿಲು ಮುಟ್ಟಿದ್ದು, ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದರೂ ಸರ್ಕಾರದ ಯಾವ ಪ್ರತಿನಿಧಿಯೂ ಘಟನಾ ಸ್ಥಳಕ್ಕೆ ಸುಳಿದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ , ಸಭಾಧ್ಯಕ್ಷ ಜಗದೀಶ್ ಶೆಟ್ಟರ್, ಹಾವೇರಿ ಉಸ್ತುವಾರಿ ಮಂತ್ರಿ ಸಿ.ಎಂ.ಉಸ್ತುವಾರಿ ಅವಳಿ ನಗರದಲ್ಲಿ ವಾಸ್ತವ್ಯ ಹೂಡಿದ್ದರೂ ನಮ್ಮ ಸಮಸ್ಯೆ ಸ್ಪಂದಿಸಿಲ್ಲ ಎನ್ನುವುದು ರೈತರು ಆಕ್ರೋಶವಾಗಿದೆ.
(ದಟ್ಸ್ ಕನ್ನಡ ವಾರ್ತೆ)