ನಿಮ್ಮ ವಿಶ್ವಾಸಿ, ಬಿ. ಎಸ್. ಯಡಿಯೂರಪ್ಪ
ಬೆಂಗಳೂರು, ಜೂ. 6 : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇಂದು ವಿಧಾನಸಭೆಯಲ್ಲಿ ಮಹತ್ವದ ದಿನ. ಮಧ್ಯಾಹ್ನದ ನಂತರ ಸದನದಲ್ಲಿ ವಿಶ್ವಾಸಮತ ಮಂಡಿಸಲಿರುವ ಯಡಿಯೂರಪ್ಪ ಈ ಸವಾಲನ್ನು ಆತ್ಮವಿಶ್ವಾಸದಿಂದ ಎದುರಿಸಲಿದ್ದಾರೆ.
ಅದಕ್ಕೂ ಪೂರ್ವದಲ್ಲಿ ಇಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನೂತನ ಸರ್ಕಾರ ಮುಂದಿನ ಗುರಿಗಳು, ಹಾಕಿಕೊಂಡಿರುವ ಯೋಜನೆಗಳು ಸೇರಿದಂತೆ ಅನೇಕ ವಿಷಯಗಳು ಅವರ ಭಾಷಣದಲ್ಲಿ ಬಿಂಬಿತವಾಗಲಿವೆ. ನಂತರ ಸ್ವಲ್ಪ ಹೊತ್ತುವನ್ನು ಮುಂದೂಡಲಾಗುವುದು. ಆ ನಂತರ ಸಮಾವೇಶಗೊಳ್ಳುವ ಸದನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸರ್ಕಾರದ ವಿಶ್ವಾಸಮತಯಾಚನೆ ಮಾಡಲಿದ್ದಾರೆ.
ವಿಶ್ವಾಸಮತ ಗೆಲ್ಲಲು ಬಿಜೆಪಿಗೆ 113 ಶಾಸಕರ ಬೆಂಬಲದ ಅಗತ್ಯವಿದೆ. ಆದರೆ ಅದಕ್ಕಿಂತ ಹೆಚ್ಚಿನ ಶಾಸಕರ ಬೆಂಬಲವನ್ನು ಬಿಜೆಪಿ ಗಳಿಸಿದೆ. ಆರು ಜನ ಪಕ್ಷೇತರರು ಸೇರಿದಂತೆ ಬಿಜೆಪಿ 110 ಮಂದಿ ಶಾಸಕರು ರಾಜ್ಯಪಾಲರಿಗೆ ಬೆಂಬಲ ಪತ್ರವನ್ನು ನೀಡಿದ್ದಾರೆ. ಪಕ್ಷೇತರ ಶಾಸಕರ ಪೈಕಿ ಗೂಳಿಹಟ್ಟಿ ಶೇಖರ್, ವೆಂಕಟರಮಣಪ್ಪ, ಶಿವರಾಜ್ ತಂಗಡಗಿ, ಡಿ.ಸುಧಾಕರ್, ವರ್ತೂರು ಪ್ರಕಾಶ್, ನರೇಂದ್ರಸ್ವಾಮಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಿ ರಾಜ್ಯಪಾಲರಿಗೆ ಪತ್ರವನ್ನು ನೀಡಿದ್ದಾರೆ.
ವಿಶ್ವಾಸಮತಯಾಚನೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸೇರಿದ್ದು, ವಿಶ್ವಾಸಮತವನ್ನು ಬೆಂಬಲಿಸುವಂತೆ ಎಲ್ಲ ಶಾಸಕರಿಗೂ ವಿಪ್ ಜಾರಿ ಮಾಡಲಾಗಿದೆ. ಸಚಿವ ಸಂಪುಟದ ಸದಸ್ಯರಿಗೆ ಇಂದು ಖಾತೆ ಹಂಚಿಕೆ ಮಾಡಲಿರುವ ಯಡಿಯೂರಪ್ಪ, ಶನಿವಾರ ಸಚಿವ ಸಂಪುಟ ವಿಸ್ತರಣೆ ಮಾಡುವರು. ಹಿರಿಯ ನಾಯಕ ಕಟ್ಟಾ ಸುಬ್ರಮಣ್ಯ ನಾಯ್ಡು ಮಂತ್ರಿ ಮಂಡಲಕ್ಕೆ ಹೊಸದಾಗಿ ಸೇರ್ಪಡೆಗೊಳ್ಳಲಿದ್ದಾರೆ.
ಇಂದು ಬೆಳಗ್ಗೆ ವಿಧಾನಸೌಧದಲ್ಲಿ ಶಾಸಕಾಂಗ ಪಕ್ಷದ ಕಚೇರಿಯನ್ನು ಸಿಎಂ ಯಡಿಯೂರಪ್ಪಉದ್ಘಾಟಿಸಿದರು.ಈ ಸಂದರ್ಭದಲ್ಲಿ ಸದಾನಂದಗೌಡ ಹಾಗೂ ಎಲ್ಲಾ ಬಿಜೆಪಿ ಶಾಸಕರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)