ಸಾಮಾನ್ಯನ ಹಿತ ಕಾಯದ ಕೇಂದ್ರ, ಬೆಲೆ ಏರಿಕೆ ಸನ್ನಿಹಿತ
ನವದೆಹಲಿ, ಜೂ.2 : ಜಾಗತಿಕವಾಗಿ ಕಚ್ಚಾ ತೈಲ ಮತ್ತು ಇತರ ವಸ್ತುಗಳ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ ಜನಸಾಮಾನ್ಯರನ್ನು ಬೆಲೆಏರಿಕೆಯ ಹೊಡೆತದಿಂದ ಸಂಪೂರ್ಣ ರಕ್ಷಿಸಲು ಸಾಧ್ಯವೇ ಇಲ್ಲ. ಇದಕ್ಕಾಗಿ ರಾಜಕೀಯ ಒಮ್ಮತಕ್ಕೆ ಬರುವುದು ಮತ್ತು ತರ್ಕಬದ್ಧವಾದ ಆರ್ಥಿಕ ನೀತಿಯನ್ನು ರೂಪಿಸುವುದು ಅಗತ್ಯವಾಗಿದೆ ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿಯಲ್ಲಿ ಏರ್ಪಡಿಸಲಾಗಿದ್ದ 87ನೇ ಅಸೋಕ್ಯಾಮ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮೀತಿಮೀರಿದ ಹಣದುಬ್ಬರದಿಂದ ದರ ಏರಿಕೆ ಅನಿವಾರ್ಯವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಅಧಾರದ ಮೇಲೆ ದರಗಳ ಸ್ಥಿತಿಗತಿ ಏರುಪೇರಾಗಿದೆ ಎಂದರು. ಇದನ್ನೇ ಅಸ್ತ್ರವಾಗಿ ಬಳಿಸಿಕೊಂಡಿರುವ ವಿರೋಧ ಪಕ್ಷಗಳು ಮಾಡುತ್ತಿರುವ ಅಪಪ್ರಚಾರಕ್ಕೆ ತೀಕ್ಣ ಪ್ರತಿಕ್ರಿಯೆ ನೀಡಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆ ಅಪಾರ ಪ್ರಮಾಣದಲ್ಲಿ ಏರಿಕೆಯಾಗಿರುವ ಹಿನ್ನಲೆಯಲ್ಲಿ ದೇಶದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಆದರೂ ಕೂಡಾ ತೈಲ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆ ಮೇಲೆ ಹಿಡಿತ ಸಾಧಿಸಲಾಗುವುದು ಎಂದು ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್ ವಿಷಾದ ವ್ಯಕ್ತಪಡಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರದ ಯುಪಿಎ ನೇತೃತ್ವದ ಸರ್ಕಾರ ತೈಲ ಬೆಲೆಗಳನ್ನು ಹೆಚ್ಚಿಸಿತ್ತು. ಅದರಲ್ಲಿ ಸೀಮೆಎಣ್ಣೆ ದರವನ್ನು ಯಥಾಸ್ಥಿತಿ ಕಾಯ್ದುಕೊಳ್ಳಲಾಗಿತ್ತು. ಅಡಿಗೆ ಅನಿಲ ಮತ್ತು ಡೀಸೆಲ್ ಗಳನ್ನು ಅಲ್ಪ ಪ್ರಮಾಣದಲ್ಲಿ ಏರಿಸಲಾಗಿತ್ತು. ಇವೆಲ್ಲವುಗಳನ್ನು ತಾಳೆ ಹಾಕಿದಲ್ಲಿ ಪೆಟ್ರೋಲ್ ದರ ಕೊಂಚ ಜಾಸ್ತಿ ಹೆಚ್ಚಿಸಲಾಗಿತ್ತು ಎಂದು ಮನಮೋಹನ್ ಸಿಂಗ್ ಹೇಳಿದರು.
ಇಂದು ಪರಿಸ್ಥಿತಿ ಬದಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಗಗನಕ್ಕೇರಿದೆ. ಸೋಮವಾರದ ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರಕಾರ ಪ್ರತಿ ಬ್ಯಾರಲ್ 127 ಡಾಲರ್ ನಷ್ಟಾಗಿದೆ. ಇದು ಹಿಂದೆಂದೂ ಕಾಣದಂತಹ ಹಣದುಬ್ಬರವಾಗಿದೆ. ಹಣದುಬ್ಬರ ಶೇ. 8 ಮೀರಿದೆ. ತೆರಿಗೆ ಮತ್ತು ಸುಂಕ ಹೆಚ್ಚಿರುವ ಕಾರಣ ಅನಿವಾರ್ಯವಾಗಿ ತೈಲ ಬೆಲೆಯನ್ನು ಹೆಚ್ಚಿಸಬೇಕಾದ ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.
ಸಗಟು ವ್ಯಾಪಾರದಲ್ಲಿ ಪ್ರತಿವಾರವೂ ಏರಿಕೆಯಾಗಿದ್ದು, 7.81 ರಷ್ಟಿದ್ದ ಹಣದುಬ್ಬರ, ಒಂದೇ ವಾರದಲ್ಲಿ ಗಮನಾರ್ಹ ಬದಲಾವಣೆಯಾಗಿ ಮೇ 17 ಹೊತ್ತಿಗೆ ಶೇ. 8.1 ರಷ್ಟಾಗಿದೆ ಎಂದ ವಿವರಿಸಿದ ಮನಮೋಹನ್ ಸಿಂಗ್, ಇದರಿಂದ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ ಎಂದರು. ಆದರೂ ಕೂಡಾ ಈ ಎಲ್ಲ ಆರ್ಥಿಕ ಹೊಡೆತವನ್ನು ಕೇಂದ್ರ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಹಣಹುಬ್ಬರ ಕಡಿಮೆಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)