ನನ್ನನ್ನು ಒಂದು ವೇಳೆ ಚುನಾವಣಾ ಕಣಕ್ಕಿಳಿಸಿದ್ದರೇ..
ನವದೆಹಲಿ, ಮೇ 31 : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅವಕಾಶ ನೀಡದಿರುವುದೇ ಕಾಂಗ್ರೆಸ್ ವರಿಷ್ಠರು ಮಾಡಿದ ದೊಡ್ಡ ತಪ್ಪು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆರೋಪಿಸಿದ್ದಾರೆ.
ಒಂದು ವೇಳೆ ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ನನಗೇ ವಹಿಸಿದ್ದರೆ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು. ಆದರೆ ಕಾಂಗ್ರೆಸ್ ನಾಯಕರು ಹಾಗೆ ಮಾಡದೆ ಪ್ರಮಾದ ಎಸಗುವ ಮೂಲಕ ಸೋಲಿಗೆ ಕಾರಣಿಭೂತರಾದರು ಎಂದು ಹೈಕಮಾಂಡ್ ಅನ್ನು ಎದುರು ಹಾಕಿಕೊಂಡಿದ್ದಾರೆ.
ಚುನಾವಣೆಗೆ ಸ್ಪರ್ಧಿಸದಂತೆ ಹಾಗೂ ಕಣದಿಂದ ದೂರ ಉಳಿಯುವಂತೆ ಉದ್ದೇಶ ಪೂರ್ವಕವಾಗಿ ನನ್ನನ್ನು ದೂರ ಇಡಲಾಯಿತು. ಆ ಕೆಲಸದಲ್ಲಿ ರಾಜ್ಯ ಮತ್ತು ಕೇಂದ್ರ ನಾಯಕರ ಕೈವಾಡವಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ನನ್ನನ್ನು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದರೆ, ಇಂದು ನಾವು ಇಂತಹ ಸ್ಥಿತಿಗೆ ಬಂದು ತಲುಪುತ್ತಿರಲಿಲ್ಲ. ನಾಯಕನಿಲ್ಲದೇ ಚುನಾವಣೆ ಎದುರಿಸಿದ್ದು, ದೊಡ್ಡ ಹಿನ್ನಡೆ ಅನುಭವಿಸುವಂತಾಯಿತು ಎಂದು ವಿವರಿಸಿದರು.
ಮಹಾರಾಷ್ಟ್ರ ರಾಜಭವನ ತೊರೆದು ನಾನು ಕರ್ನಾಟಕದತ್ತ ಮುಖ ಮಾಡಿದಾಗ ಸೃಷ್ಟಿಯಾಗಿದ್ದ ಅಬ್ಬರವನ್ನು ಬಳಿಸಿಕೊಳ್ಳಲು ಪಕ್ಷ ವಿಫಲವಾಯಿತು. ಬೆಳಗಾವಿ ಮೂಲಕ ಪ್ರವೇಶಿಸಿಲೂ ನನಗೆ ಅವಕಾಶ ಕೊಡದಿದ್ದುದೂ ದೊಡ್ಡ ಪೆಟ್ಟು ಬೀಳಲು ಕಾರಣವಾಯಿತು. ಅದರಿಂದ ಗೆಲುವಿನ ನಾಗಾಲೋಟಕ್ಕೆ ಬಾಗಶಃ ಹೊಡೆತ ಬಿದ್ದಿತು ಎಂದು ಕೃಷ್ಣ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)