ಪೆಟ್ರೋಲ್ ಬೆಲೆ ಹೆಚ್ಚಳ : ಇಂದು ಮಹತ್ವದ ಸಭೆ
ನವದೆಹಲಿ, ಮೇ 29 : ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿರುವುದರಿಂದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಿಸುವ ಕುರಿತಂತೆ ಪ್ರಧಾನಿ ಮನಮೋಹನ ಸಿಂಗ್ ನೇತೃತ್ವದಲ್ಲಿ ಮಹತ್ವದ ಸಭೆ ಇಂದು ನಡೆಯಲಿದೆ.
ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ತೈಲ ಸಂಸ್ಥೆಗಳು ಭಾರೀ ನಷ್ಟ ಅನುಭವಿಸುತ್ತಿವೆ. ಇದು ಹೀಗೆ ಮುಂದುವರಿದರೆ ಸೆಪ್ಟೆಂಬರ್ ನಂತರ ತೈಲ ಆಮದು ಮಾಡಿಕೊಳ್ಳಲು ಹಣವೇ ಇಲ್ಲದಂಥ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಅನ್ಯ ದಾರಿಯಿಲ್ಲದೇ ತೈಲ ಸಂಸ್ಥೆಗಳ ನಷ್ಟವನ್ನು ಭರ್ತಿಮಾಡಲು ಪೆಟ್ರೋಲ್ ಉತ್ಪನ್ನಗಳ ಬೆಲೆ ಏರಿಸಲೇಬೇಕಾದ ಒತ್ತಡದಲ್ಲಿ ಯುಪಿಎ ಸರ್ಕಾರ ಸಿಲುಕಿದೆ.
ಬುಧವಾರ ಕೇಂದ್ರ ಪೆಟ್ರೋಲಿಯಂ ಸಚಿವ ಮುರಳಿ ದೇವೋರಾ ಅವರು ಪ್ರಧಾನಿ ಮನಮೋಹನ್ ಅವರನ್ನು ಭೇಟಿಯಾದನಂತರ ಸಭೆಯ ಬಗ್ಗೆ ನಿರ್ಧರಿಸಲಾಯಿತು. ಈ ಸಭೆಯಲ್ಲಿ ಪ್ರಧಾನಿ, ಪೆಟ್ರೋಲಿಯಂ ಸಚಿವ ದೇವೋರಾ, ವಿತ್ತ ಸಚಿವ ಪಿ.ಚಿದಂಬರಂ, ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಭಾಗವಹಿಸಲಿದ್ದಾರೆ.
ಮುಂಬೈನಲ್ಲಿ ತೈಲ ಕಂಪನಿಗಳು ಈಗಾಗಲೆ ಡೀಲರ್ಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜನ್ನು ಸಂಪೂರ್ಣವಾಗಿ ನಿಲ್ಲಿಸಿವೆ. ಜನರೆಲ್ಲ ಪೆಟ್ರೋಲ್ ಸಿಗದೆ ಪರದಾಡುತ್ತಿದ್ದಾರೆ. ಬೆಲೆ ಹೆಚ್ಚಳ ತಡೆಯಲು ಸಾಧ್ಯವಿಲ್ಲವಾದರೂ ಎಷ್ಟು ಹೆಚ್ಚಿಸಬೇಕೆಂಬ ಜಿಜ್ಞಾಸೆಯಲ್ಲಿ ಕೇಂದ್ರ ಮುಳುಗಿದೆ. ಚುನಾವಣೆ ಹೊಸ್ತಿಲಲ್ಲೇ ಇರುವುದರಿಂದ ಪೆಟ್ರೋಲ್ ಬೆಲೆಯನ್ನು ವಿಪರೀತ ಹೆಚ್ಚಿಸಿ ಜನರ ಕ್ರೋಧವನ್ನು ಮೈಮೇಲೆ ಎಳೆದುಕೊಳ್ಳಲು ಸರ್ಕಾರ ತಯಾರಿಲ್ಲ.
ತೈಲ ಕಂಪನಿಗಳ ನಷ್ಟ ತುಂಬಿಕೊಡಲು ತೆರಿಗೆದಾರರ ಮೇಲೆ ತೈಲ ಮೇಲುತೆರಿಗೆ ಹೇರಬೇಕೆಂಬ ಪೆಟ್ರೋಲಿಯಂ ಸಚಿವಾಲಯದ ಬೇಡಿಕೆಯನ್ನು ಚಿದಂಬರಂ ತಳ್ಳಿಹಾಕಿದ್ದಾರೆ. ಜೊತೆಗೆ ಆಮದು ತೆರಿಗೆ ಮತ್ತು ಅಬಕಾರಿ ತೆರಿಗೆಯನ್ನು ಕಡಿತ ಮಾಡಬೇಕೆಂಬ ಪ್ರಸ್ತಾವನೆಯೂ ಇದೆ.
(ಏಜೆನ್ಸೀಸ್)