ಕೆರೆಗೆ ಉರುಳಿದ ದಿಬ್ಬಣದ ಲಾರಿ, 40ಕ್ಕೂ ಹೆಚ್ಚು ಸಾವು
ಹಾಸನ, ಮೇ 29 : ರಸ್ತೆ ಮೇಲೆ ಇಳಿಬಿದ್ದಿದ್ದ ಹೈಟೆನ್ ಶನ್ ತಂತಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡ ಲಾರಿಯೊಂದು ಕೆರೆಗೆ ಉರುಳಿ ಬಿದ್ದ ಪರಿಣಾಮ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 40 ಜನರು ಮತಪಟ್ಟಿದ್ದು, 40 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಹೃದಯ ವಿದ್ರಾವಕ ಘಟನೆ ಕೋಣನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಗ್ರಹಾರ ಗ್ರಾಮದ ಸಮೀಪ ಗುರುವಾರ ಮಧ್ಯಾಹ್ನ ಜರುಗಿದೆ.
ಸುಮಾರು 120 ಕ್ಕೂ ಹೆಚ್ಚು ಮಂದಿಯನ್ನು ತುಂಬಿದ್ದ ಲಾರಿಯೊಂದು ದಿಬ್ಬಣದ ಸಮಾರಂಭವೊಂದಕ್ಕೆ ತೆರಳುತ್ತಿದ್ದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಮದುವೆಯ ಸಂಭೃಮದಲ್ಲಿದ್ದ ಕುಟುಂಬ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿ ಮಸಣ ಸೇರಿದ ದುರಂತ ಘಟನೆ ನಡೆದಿದೆ. ರಸ್ತೆಯ ಮೇಲೆ ಬಿದ್ದ ತಂತಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡ ಲಾರಿ, ಮೂರು ಸುತ್ತು ಪಲ್ಟಿ ಹೊಡೆದು ಕೆರೆಗೆ ಹೋಗಿ ಬಿದ್ದಿದೆ. ಲಾರಿಯಲ್ಲಿ 10 ಮಕ್ಕಳು, 30 ಮಂದಿ ಮಹಿಳೆಯರು ಇದ್ದರು. ಮೃತಪಟ್ಟವರಲ್ಲಿ ಅನೇಕರು ಒಂದೇ ಕುಟುಂಬಕ್ಕೆ ಸೇರಿದವರು. ಮೃತಪಟ್ಟವರು ಬಸವನಕೊಪ್ಪಲಿನ ನಿವಾಸಿಗಳು. ಮದುವೆ ಸಮಾರಂಭಕ್ಕೆ ಸಮೀಪದ ರಾಮನಾಥಪುರ ಅಗ್ರಹಾರಕ್ಕೆ ತೆರಳುತ್ತಿದ್ದರು.
ಘಟನಾ ಸ್ಥಳಕ್ಕೆ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದು, ತಮ್ಮವರನ್ನು ಕಳೆದುಕೊಂಡಿರುವ ಜನರ ಅಕ್ರಂಧನ ಮುಗಿಲು ಮುಟ್ಟಿದೆ. ದುಖಃದ ಮಡುವಿನಲ್ಲಿ ಸಂಬಂಧಿಕರ ರೋಧನ ಹೇಳತೀರದಾಗಿದೆ. ಗಾಯಳುಗಳನ್ನು ಅರಕಲಗೂಡು ಮತ್ತು ಕೋಣನೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತುರ್ತುಚಿಕಿತ್ಸೆಗಾಗಿ ಘಟನಾ ಸ್ಥಳಕ್ಕೆ 10 ವೈದ್ಯರ ತಂಡವನ್ನು ರವಾನಿಸಲಾಗಿದೆ. ಸ್ಥಳದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ವರಿಷ್ಠಧಿಕಾರಿ ಮೊಕ್ಕಾಂ ಹೂಡಿದ್ದು, ಅಗತ್ಯಕ್ರಮಗಳನ್ನು ಕೈಗೊಂಡಿದ್ದಾರೆ.
ಬಸವನಕೊಪ್ಪಲು ಗ್ರಾಮದ ಗ್ರಾಮಸ್ಥರು ಮದುವೆ ಕಾರ್ಯಕ್ಕೆ ಲಾರಿಯ ಮೂಲಕ ಅಗ್ರಹಾರದ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕೆರೆ ದಂಡೆಯಲ್ಲಿ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಈ ಆಕಸ್ಮಿಕ ಸಂಭವಿಸಿದೆ. ದಾರಿಯಲ್ಲಿ ಬಿದ್ದಿದ್ದ ಹೈಟೆನ್ಷನ್ ವಿದ್ಯುತ್ ತಂತಿಯನ್ನು ತಪ್ಪಿಸಲು ಹೋದಾಗ, ನಿಯಂತ್ರಣ ತಪ್ಪಿ, ಲಾರಿ ಮೂರು ಪಲ್ಟಿ ಹೊಡೆದು ಕೆರೆಗೆ ಉರುಳಿದೆ. ಲಾರಿಯಲ್ಲಿ 120ಕ್ಕೂ ಹೆಚ್ಚು ಜನ ತುಂಬಿಕೊಂಡಿದ್ದರು. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಮೃತರೆಲ್ಲರೂ ಬಸವನಕೊಪ್ಪಲು ಗ್ರಾಮಕ್ಕೆ ಸೇರಿದವರು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಶರತ್ ಚಂದ್ರ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)