ಜೆಡಿಎಸ್ ಒಡೆಯಲು ಬಿಜೆಪಿ ಸಂಚು : ಕುಮಾರ ಆರೋಪ
ಬೆಂಗಳೂರು, ಮೇ 26 : ಬಹುಮತ ಸಾಬೀತುಪಡಿಸಲು ಅಗತ್ಯವಿರುವ ಸಂಖ್ಯೆಗಾಗಿ ಪಕ್ಷೇತರರನ್ನು ಬಿಜೆಪಿ ಕೊಂಡುಕೊಂಡಿದ್ದಲ್ಲದೆ ಜಾತ್ಯತೀತ ಜನತಾದಳವನ್ನು ಒಡೆಯಲು ಹುನ್ನಾರ ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಪಕ್ಷೇತರರ ಮೇಲೆ ಸಂಪೂರ್ಣ ನಂಬಿಕೆಯಿಲ್ಲದ್ದರಿಂದ ಬಿಜೆಪಿಯ ರಾಯಭಾರಿಗಳು ಜೆಡಿಎಸ್ ಶಾಸಕರನ್ನು ಬೆಂಬಲಕ್ಕಾಗಿ ಸಂಪರ್ಕಿಸಿದ್ದಾರೆ, ಆಮಿಷ ಒಡ್ಡುತ್ತಿದ್ದಾರೆ. ಬಿಜೆಪಿಗೆ ಜೆಡಿಎಸ್ ಶಾಸಕರು ಯಾವುದೇ ರೀತಿಯಲ್ಲೂ ಬೆಂಬಲ ನೀಡುವುದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟವಾಗಿ ನುಡಿದರು.
ಯಾವುದೋ ವ್ಯಾಮೋಹದಿಂದ ಬಿಜೆಪಿಗೆ ಬೆಂಬಲ ಸೂಚಿಸಿರುವ ಪಕ್ಷೇತರ ಅಭ್ಯರ್ಥಿಗಳಿಗೆ ಮುಂದಿನ ದಿನಗಳಲ್ಲಿ ಬೆಂಬಲ ನೀಡಿರುವುದು ಸಮಂಜಸವೋ ಅಸಂಮಜವೋ ಎಂಬುದು ಮನವರಿಕೆಯಾಗಲಿದೆ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.
ನಾವು ಯಾವುದೇ ರೀತಿಯಲ್ಲಿ ಮೈತ್ರಿಗೆ ಮುಂದಾಗುವುದಿಲ್ಲ. ಜನಾದೇಶಕ್ಕೆ ಗೌರವ ನೀಡಿ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತು ಜವಾಬ್ದಾರಿ ನಿರ್ವಹಿಸಲು ಜೆಡಿಎಸ್ ಶಾಸಕರು ಸಿದ್ಧ. ಬಿಜೆಪಿ ಸರ್ಕಾರ ರಚಿಸಿ ಜನತೆಯ ಒಳಿತಿಗಾಗಿ ಕಾರ್ಯಕ್ರಮ ರೂಪಿಸಿದರೆ ಜೆಡಿಎಸ್ ಕೂಡ ಸಹಕರಿಸಲಿದೆ ಎಂದು ಅವರು ಹೇಳಿದರು.
ಜೆಡಿಎಸ್ ಜೊತೆ ಕೈಜೋಡಿಸಲು ಸಿದ್ಧವಾಗಿರುವ ಕಾಂಗ್ರೆಸ ಈಗಾಗಲೇ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ ಎಂಬ ಬಗ್ಗೆ ಕೇಳಿದಾಗ, ತಾವಾಗಿಯೇ ಮೈತ್ರಿಗೆ ಮುಂದುವರಿಯುವುದಿಲ್ಲ, ಅವರಾಗಿಯೇ ಮುಂದುವರಿದರೆ ನೋಡೋಣ ಎಂದು ತಿಳಿಸಿದರು.
(ದಟ್ಸ್ಕನ್ನಡ ವಾರ್ತೆ)