ಅಕ್ರಮ ಗಣಿ ವ್ಯವಹಾರ : ಗಣಿಧಣಿಗಳಿಗೆ ನೋಟೀಸ್
ಬಳ್ಳಾರಿ, ಮೇ 24 : ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಗಣಿ ಮಾಲೀಕರಿಗೆ ಇಂದು ನೋಟೀಸ್ ನೀಡಲಾಗುವುದಾಗಿ ಬೃಹತ್ ಪ್ರಮಾಣದಲ್ಲಿ ತನಿಖೆ ನಡೆಸುತ್ತಿರುವ ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗಡೆ ಹೇಳಿದ್ದಾರೆ.
ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಶನಿವಾರ ಹೇಳಿದರು.
ಬಳ್ಳಾರಿ ಸೇರಿದಂತೆ ಸುತ್ತ ಮುತ್ತಲಿನ ಗಣಿ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಮಾಡುತ್ತಿರುವುದು ಸ್ಪಷ್ಟವಾಗಿದೆ. ಈ ದಂಧೆಯಲ್ಲಿ ತೊಡಗಿರುವ ಅನೇಕರ ಪಟ್ಟಿಯನ್ನು ತಯಾರಿಸಲಾಗಿದೆ. ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಪಟ್ಟಿಯಲ್ಲಿದ್ದಾರೆ. ಅವರಿಗೆ ಇಂದು ಸಂಜೆಯೊಳಗೆ ನೋಟೀಸ್ ನೀಡಲಾಗುವುದು ಎಂದರು.
ನೋಟೀಸ್ ಪಡೆದುಕೊಂಡಿರುವ ವ್ಯಕ್ತಿ 15 ದಿನಗಳೊಳಗೆ ಗಣಿ ವ್ಯವಹಾರದ ಕುರಿತು ಸಮಗ್ರ ವರದಿಯನ್ನು ಲೋಕಾಯುಕ್ತ ಇಲಾಖೆಗೆ ಸಲ್ಲಿಸಬೇಕು. ಆ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಇಲಾಖೆ ಸರ್ಕಾರಕ್ಕೆ ಕಳುಹಿಸಲಿದೆ ಎಂದರು.
ಅಕ್ರಮ ಗಣಿಗಾರಿಕೆಯಿಂದ ಸರ್ಕಾರ ನೂರಾರು ಕೋಟಿ ರುಪಾಯಿಗಳ ನಷ್ಟ ಅನುಭವಿಸುತ್ತಿದೆ. ಗಣಿ ಮಾಲೀಕರು ಪರವಾನಗಿ ಬೇರೆಯದಕ್ಕೆ ಪಡೆದುಕೊಂಡು ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ. ಇದು ಸರ್ಕಾರಕ್ಕೆ ಮೋಸ ಮಾಡುವಂಥ ಕೃತ್ಯವಾಗಿದೆ. ಇಂತಹ ಅನೇಕ ಪ್ರಕರಣಗಳು ಇಲಾಖೆ ಗಮನಕ್ಕೆ ಬಂದಿದ್ದು, ಸೂಕ್ತ ತನಿಖೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅದಿರು ರಾಜ್ಯ ಮತ್ತು ದೇಶದ ಆಸ್ತಿ. ಅದು ಒಬ್ಬ ಮಾಲೀಕನ ಸ್ವತ್ತಾಗಬಾರದು ಎಂದ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ಆಂಧ್ರ ಪ್ರದೇಶದಿಂದ ನಡೆಸಲಾಗುತ್ತಿದೆ ಎಂದು ಕೆಲವರು ತಪ್ಪು ಮಾಹಿತಿಯನ್ನು ಒದಗಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುವುದು ಎಂದು ಸಂತೋಷ ಹೆಗಡೆ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)