ಬಯಲು ಬಂಧೀಖಾನೆಯಲ್ಲಿ ಕರವೇ ಸೇನಾಪಡೆ
ಬೆಂಗಳೂರು, ಮೇ 23: ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಲು ವಿಳಂಬ ಧೋರಣೆ ಅನುಸರಿಸುತ್ತಿರುವ ಬಿಐಎ ಎಲ್ ಧೋರಣೆಯನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಪ್ರತಿಭಟನೆ ಇಂದು ಕೂಡ ವ್ಯಾಪಕವಾಗಿ ಮುಂದುವರೆದಿದೆ. ಇದೇ ವೇಳೆ ಉದ್ಘಾಟನೆ ಸಮಾರಂಭ, ಬಾಜಾಬಜಂತ್ರಿಯನ್ನು ಕೈಬಿಟ್ಟ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದ ಆಡಳಿತವರ್ಗ ಮೊದಲ ವಿಮಾನ ಹಾರಾಟದ, ಮೊದಲ ರಾತ್ರಿಯ ಪುಳಕ್ಕೆ ಅಣಿಯಾಗಿದೆ.
ನೂತನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕು. ಕನ್ನಡಿಗ ಟ್ಯಾಕ್ಸಿ ಚಾಲಕರಿಗೆ ಮತ್ತೆ ಗುತ್ತಿಗೆ ಅವಕಾಶ ನೀಡಬೇಕು. ಕನ್ನಡ ಸಂಸ್ಕೄತಿಯನ್ನು ವಿಮಾನ ನಿಲ್ದಾಣದಲ್ಲಿ ಬಿಂಬಿಸಬೇಕು . ದೇವನಹಳ್ಳಿ ತಾಲ್ಲೂಕಿನ 3 ಸಾವಿರ ರೈತ ಕುಟುಂಬದ ಸದಸ್ಯರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ವಿವಿಧ ಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ. ಎ. ನಾರಾಯಣಗೌಡ ಅವರ ಸಾರಥ್ಯದಲ್ಲಿ ಬಸವರಾಜ ಪಡುಕೋಣೆ, ನಾಗೇಂದ್ರಬಾಬು, ಅಂಜನಪ್ಪ, ದಾ. ಕೃ ದೇವರಾಜ, ಎ.ಎಸ್. ನಾಗರಾಜ್ ಮುಂತಾದ ಕನ್ನಡ ಪರ ಮುಖಂಡರು ಹೋರಾಟ ನಡೆಸಿದರು.
ನಗರದ ಮೈಸೂರು ರಸ್ತೆಯಲ್ಲಿ ರಸ್ತೆ ತಡೆ ನಡೆಸಿ, ಸಂಚಾರ ಅಸ್ತವ್ಯಸ್ತಗೊಳಿಸಿದ ಕಾರಣಕ್ಕೆ ಸುಮಾರು 400 ಜನ ಕನ್ನಡ ಪರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಇಟ್ಟಿದ್ದಾರೆ. ಇವರ ಕಾವಲಿಗೆ ಸುಮಾರು 500 ಜನ ಪೊಲೀಸರನ್ನು ನಿಯೋಜಿಸಲಾಗಿದ್ದು, 9 ಜನ ಎಸಿಪಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಪ್ರತಿಭಟನೆಯಿಂದಾಗಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಸಂಚಾರ ಪರಿಸ್ಥಿತಿ ಈಗ ಸುಗಮವಾಗಿದೆ ಎಂದು ನಗರ ಉತ್ತರವಲಯದ ಡಿಸಿಪಿ ಉಲ್ತಾಫ್ ಅವರು ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.
ಕರವೇ ಹೋರಾಟಕ್ಕೆ ಆದಿ ಚುಂಚನಗಿರಿ ಮಠಾಧೀಶರು, ಕೊಳದಮಠದ ಶ್ರೀಗಳು, ಸೋಸಾಯಿ ಮಠದ ಶ್ರೀಗಳು ಸೇರಿದಂತೆ ವಿವಿಧ ಗಣ್ಯರ ಬೆಂಬಲ ದೊರೆತಿದ್ದು, ಬೇಡಿಕೆ ಈಡೇರುವವರೆಗೂ ಹೋರಾಟ ಜಾರಿಯಲ್ಲಿರುತ್ತದೆ. ದೇವನಹಳ್ಳಿ ಸುತ್ತಾಮುತ್ತಾ 3 ದಿನಗಳ ಕಾಲ್ ನಿಷೇಧಾಜ್ಞೆ ಹೇರಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯ ಸ್ವರೂಪದ ಬಗ್ಗೆ ವಿವಿಧ ಸಂಘಟನೆಗಳ ಜತೆ ನಾರಾಯಣಗೌಡರು ಚರ್ಚಿಸಿದರು. ವಿಜಯಪುರ, ದೇವನಹಳ್ಳಿಯ ಕರವೇ ಘಟಕಗಳಿಗೆ ಸೂಚನೆ ನೀಡಲಾಗಿದ್ದು, ಪ್ರತಿಭಟನೆ ದಿನಕಳೆದಂತೆ ತೀವ್ರವಾಗಿ ನಡೆಯಲಿದೆ ಎಂದು ಕಾರ್ಯಕರ್ತರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ:
ದೇವನಹಳ್ಳಿ
ಸುತ್ತಾಮುತ್ತಾ
3
ದಿನ
ನಿಷೇಧಾಜ್ಞೆ
ಜಾರಿ
ಬಿಐಎಎಲ್ಗೆ
ನಾಡಪ್ರಭು
ಕೆಂಪೇಗೌಡರ
ಹೆಸರಿಡಿ
ವಿಮಾನ
ನಿಲ್ದಾಣ
ಹೇಗೆ
ಸಿಂಗಾರಗೊಳ್ಳುತ್ತಿದೆ
ಕಂಡಿರಾ?
ವಿಮಾನ
ನಿಲ್ದಾಣ
:
ಕರವೇಗೆ
ಬೆಂಬಲ
ಉಕ್ಕಿನ
ಹಕ್ಕಿಗಳಲ್ಲಿ
ಕನ್ನಡದ
ಉಲಿ