ಗಣಿನಾಡು ಬಳ್ಳಾರಿಯಲ್ಲಿ ಪಕ್ಷಕ್ಕಿಂತಲೂ ವ್ಯಕ್ತಿ ಮುಖ್ಯ
ಬಳ್ಳಾರಿ, ಮೇ 14: ಗಣಿಧಣಿಗಳೊಂದಿಗೆ 31 ಅಭ್ಯರ್ಥಿಗಳು ಬಳ್ಳಾರಿ ನಗರ ವಿಧಾನಸಭೆ ಕಣದಲ್ಲಿದ್ದಾರೆ. ಯಾರಿಗೆ ಮತ ಹಾಕಬೇಕೆಂದು ಮತದಾರ ಗೊಂದಲಕ್ಕೆ ಸಿಲುಕಿದ್ದಾನೆ. ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,33,403 ಮತದಾರರಲ್ಲಿ 1,13,397 ಮತದಾರರು ಮಹಿಳೆಯರು.
ಮೇ 16ರಂದು ಎರಡನೇ ಹಂತ ಚುನಾವಣೆಗೆ ಬಳ್ಳಾರಿ ನಗರ ಸಜ್ಜಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಗಣಿ ಧಣಿಗಳನ್ನು ಕಣಕ್ಕಿಳಿಸಿವೆ. ಜೆಡಿಎಸ್ನಲ್ಲಿದ್ದ ದಿವಾಕರಬಾಬು ಕಾಂಗ್ರೆಸ್ಗೆ ಮರಳಿ ಕಾಂಗ್ರೆಸ್ನ ಅನಿಲ್ ಲಾಡ್ ಹಾಗೂ ಬಿಜೆಪಿಯ ಸೋಮಶೇಖರ ರೆಡ್ಡಿ ನಡುವಿನ ನೇರ ಹಣಾಹಣಿಗೆ ದಾರಿ ಸುಗಮ ಮಾಡಿಕೊಟ್ಟಿದ್ದಾರೆ. ಹಾಗಾಗಿ ಈಗ ಎಲ್ಲರ ಕಣ್ಣು ಬಳ್ಳಾರಿ ಮೇಲೆ ಬಿದ್ದಿದೆ.
ಬಳ್ಳಾರಿ ಕಣದಲ್ಲಿರುವ ಈ ಇಬ್ಬರು ಪ್ರತಿಷ್ಠಿತ ಅಭ್ಯರ್ಥಿಗಳು ತಮ್ಮ ಅಸ್ತಿತ್ವಕ್ಕಾಗಿ ಜಿದ್ದಾಜಿದ್ದಿನ ಸ್ಪರ್ಧೆಗೆ ಅಣಿಯಾಗಿದ್ದಾರೆ. ಅವರ ಮುಂದೆ ಗೆಲ್ಲಲೇ ಬೇಕೆಂಬ ಆಕಾಂಕ್ಷೆ ಇದೆ. ಅದಕ್ಕಾಗಿ ಏನು ಮಾಡಲೂ ಸಿದ್ಧವಾಗಿದ್ದಾರೆ. ಇವರ ಸ್ಪರ್ಧೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಹೊರತು ಪಡಿಸಿ ಉಳಿದ ರಾಜಕೀಯ ಪಕ್ಷಗಳು ಸಹ ಪಕ್ಕಕ್ಕೆ ಸರಿದಿವೆ. ಪಕ್ಷಕ್ಕಿಂತಲೂ ಇಲ್ಲಿ ವ್ಯಕ್ತಿ ಮುಖ್ಯ ಅನ್ನುವ ಮಾತು ಕೇಳಿಬರುತ್ತಿದೆ.
ಬಳ್ಳಾರಿ ಜಿಲ್ಲೆ ತನ್ನ ಒಡಲಲ್ಲಿ ಹೇರಳ ಖನಿಜ ಸಂಪನ್ಮೂಲವನ್ನು ತುಂಬಿಕೊಂಡಿದ್ದರೂ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಗೆ ಗುರಿಯಾಗಿದೆ. ಗಣಿಧಣಿಗಳ ಹಣದ ಥೈಲಿ ಮುಂದೆ ಬಳ್ಳಾರಿಯಲ್ಲಿ ಎಲ್ಲವೂ ನಗಣ್ಯ ಕಣದಲ್ಲಿರುವವರಿಗೆ ಹಣವನ್ನು ಪಣಕ್ಕೊಡಿ ಗೆಲ್ಲುವುದೊಂದೇ ಗುರಿ. ಇದು ಬಳ್ಳಾರಿ ಜಿಲ್ಲೆಯ ದುರಂತ ಕಥೆ.
(ದಟ್ಸ್ಕನ್ನಡ ವಾರ್ತೆ)