ನಕ್ಸಲ್ ಬೆಂಬಲ ಆರೋಪ ತಳ್ಳಿಹಾಕಿದ ಕಾಂಗ್ರೆಸ್
ಶೃಂಗೇರಿ,ಮೇ 14: ಬಿಜೆಪಿಯನ್ನು ಸೋಲಿಸಲು ನಕ್ಸಲರ ಜತೆಗೆ ಕಾಂಗ್ರೆಸ್ ಕೈಜೋಡಿಸಿದೆ ಎಂಬ ವದಂತಿ ಜಿಲ್ಲೆಯಲ್ಲಿ ದಟ್ಟವಾಗಿ ಹಬ್ಬಿರುವ ಹಿನ್ನಲೆಯಲ್ಲಿ, ಈ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿರುವ ಕಾಂಗ್ರೆಸ್ ಇದೆಲ್ಲ ಕಟ್ಟು ಕತೆ, ಪ್ರಜಾತಂತ್ರ ವಿರೋಧಿಗಳ ಜತೆಗೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟೀಕರಿಸಿದೆ.
ಕೊಪ್ಪ ಮತ್ತು ಶೃಂಗೇರಿ ಭಾಗದಲ್ಲಿರುವ ಜನರ ಮನವೊಲಿಕೆಗೆ ಮಾಜಿ ಕಾನೂನು ಸಚಿವ ಡಿ.ಬಿ.ಚಂದ್ರೇಗೌಡ ಅವರು ಕಾಂಗ್ರೆಸ್ ಪರವಾಗಿ ಮತಗಿಟ್ಟಿಸಲು ನಕ್ಸಲರನ್ನು ಬಳಿಸಿಕೊಂಡಿದ್ದಾರೆ ಎಂದು ಸುದ್ದಿ ಗಾಢವಾಗಿ ಹಬ್ಬಿತ್ತು.
''ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಏನಾದರೂ ಮಾಡಲು ಸಿದ್ಧ ಎನ್ನಲು ಈ ಘಟನಯೇ ಸಾಕ್ಷಿ. ಪ್ರಜಾಪ್ರಭುತ್ವಕ್ಕೆ ವಿರೋಧಿಯಾಗಿರುವ ನಕ್ಸಲರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅವರಿಂದ ಮತಯಾಚಿಸುವಂತ ದುರ್ಗತಿ ಕಾಂಗ್ರೆಸ್ಗೆ ಬರಬಾರದಿತ್ತು. ವಿಷಯ ಗಂಭೀರವಾಗಿದ್ದು, ಕಾಂಗ್ರೆಸ್ ಪಕ್ಷದ ನಾಯಕರು ಮಾಡುತ್ತಿರುವ ಈ ಕೆಲಸ ಎಷ್ಟು ಸರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ'' ಎಂದು ಶೃಂಗೇರಿ ಶಾಸಕ ಜೀವರಾಜ್ ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸಿ ಎಂದು ನಕ್ಸಲರನ್ನು ಕೇಳಿಕೊಂಡಿದ್ದಾರೆ ಎನ್ನುವ ಗಾಳಿ ಸುದ್ದಿಗೆ ಪ್ರತಿಕ್ರಿಯಿಸಿರುವ ಚಂದ್ರೇಗೌಡ, ಇದೆಲ್ಲ ಕಟ್ಟುಕತೆ ಎಂದು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯ ವಿರೋಧಿಗಳ ಜತೆಗೆ ಹೊಂದಾಣಿಕೆ ಅಸಾಧ್ಯ. ಅನಗತ್ಯವಾಗಿ ಇಂತಹ ಸೂಕ್ಷ್ಮ ವಿಷಯಗಳನ್ನು ಎಳೆದು ತರುತ್ತಿದ್ದಾರೆ ಎಂದು ಅವರು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದರಲ್ಲಿ ರಾಜಕೀಯ ತಂತ್ರ ಅಡಗಿದೆ ಎಂದು ಆರೋಪಿಸಿದ ಅವರು, ಮತದಾರರನ್ನು ಸೆಳೆಯಲು ಬಿಜೆಪಿ ಪಕ್ಷದ ಮುಖಂಡರು ನಡೆಸಿರುವ ನಾಟಕ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)