ಈ ಕ್ಷೇತ್ರಗಳ ಗೆಲುವಿನ ಮೇಲೆ ಪಟ್ಟದ ನಿರ್ಣಯ
ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸರ್ಕಾರ ಬರುತ್ತೊ ಅಥವಾ ಪ್ರಮುಖ ಪಕ್ಷಕ್ಕೆ ಬಹುಮತ ಸಿಗುತ್ತೊ ಅದು ಒತ್ತಟ್ಟೆಗೆ ಇರಲಿ. ಇಲ್ಲಿ ಒಂದು ಮಹತ್ವ ಅಂಶವನ್ನು ಗಮನಿಸುವುದಾದರೆ ಈ ಚುನಾವಣೆ ಕೆಲವು ಘಟಾನುಘಟಿ ರಾಜಕಾರಣಿ ಎಂದು ಹೆಸರು ಮಾಡಿರುವ ಹಿರಿ ತಲೆಗಳ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಗೆದ್ದರೆ ಚಲಾವಣೆ, ಬಿದ್ದರೆ ಮೂಲೆಗುಂಪು ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
*ಮೃತ್ಯುಂಜಯ ಕಲ್ಮಠ
ಇಡೀ ರಾಜ್ಯದ ಗಮನ ಸೆಳೆದಿರುವ ಶಿಕಾರಿಪುರ ಕ್ಷೇತ್ರ ಭಾರಿ ಪ್ರತಿಷ್ಠೆಯ ಕಣ. ಇಲ್ಲಿ ಸ್ಪರ್ಧಿಸಿರುವ ಹುರಿಯಾಳಾದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮತ್ತು ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತರಾಗಿರುವ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಇಬ್ಬರು ಮದಗಜಗಳೇ. ರಾಜಕೀಯ ಇತಿಹಾಸ ಕೆದಕಿದಲ್ಲಿ ಬಂಗಾರಪ್ಪ ಅವರ ರಾಜಕೀಯ ಜೀವನ ಅತ್ಯಂತ ವರ್ಣರಂಜಿತ.ಹಾಗೆಯೇ ಭಾರಿ ಕುತೂಹಲ ಕೆರಳಿಸುತ್ತದೆ ಕೂಡಾ. ಆದರೆ ಯಡಿಯೂರಪ್ಪ ಅವರ ವಿರುದ್ಧ ಸ್ಪರ್ಧಿಸಲು ಯಾವ ಕಾಣದ ಕೈ ಕೆಲಸ ಮಾಡಿತೊ ಗೊತ್ತಿಲ್ಲ. ಒಟ್ಟಿನಲ್ಲಿ ಬಂಗಾರಪ್ಪ ಶಿಕಾರಪುರದಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ಕಮಲಕ್ಕೆ ಸೆಡ್ಡು ಹೊಡೆದಿದ್ದಾರೆ. ಎಪ್ಪತ್ತು ಚಿಲ್ಲರೆ ವಯಸ್ಸಾಗಿದ್ದರೂ ಯುವಕನಂತೆ ಓಡಾಡುವ ಬಂಗಾರಪ್ಪ ಇತ್ತೀಚಿನ ದಿನಗಳಲ್ಲಿ ಅವರಿಗೆ ಆರೋಗ್ಯ ಕೈಕೊಡತೊಡಗಿದೆ. ಅದರಿಂದ ಅವರು ತುಸು ಮಂಕಾಗಿದ್ದಾರೆ. ಬಂಗಾರಪ್ಪ ಗೆದ್ದರೆ ಬಿಜೆಪಿಗೆ ಭಾರಿ ಹೊಡೆತ ಕೊಟ್ಟಂತಾಗುತ್ತದೆ. ಸೋತರೆ ಬಹುಶಃ ಇದು ಅವರ ಕೊನೆಯ ಚುನಾವಣೆಯಾಗಬಹುದು.
ಇನ್ನೂ ಯಡಿಯೂರಪ್ಪ ಅವರ ವಿಚಾರಕ್ಕೆ ಬರುವುದಾದರೆ ಆರ್ ಎಸ್ಎಸ್ ನ ಕಟ್ಟಾ ಅನುಯಾಯಿಯಾಗಿರುವ ಇವರು ಈ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ. ಈ ಸಲ ನೀವು ಮುಖ್ಯಮಂತ್ರಿಯೊಬ್ಬನಿಗೆ ಮತ ಚಲಾಯಿಸುತ್ತೀರಿ ಎನ್ನುವುದು ಜನತೆಯಲ್ಲಿ ಇವರ ಅರಿಕೆ. ಅದರ ಜತೆ ಜತೆಗೆ ಯಡಿಯೂರಪ್ಪ, ಬಂಗಾರಪ್ಪ ಅವರ ಠೇವಣಿಯನ್ನು ಕಳೆಯುವೆ ಎಂದು ಮಾತನಾಡಿರುವುದು ಅನೇಕರಲ್ಲಿ ಅಸಮಾಧಾನ ಉಂಟು ಮಾಡಿದೆ. ಹಿಂದುಳಿದವರು, ಈಡಿಗರು ಮತ್ತು ಲಿಂಗಾಯಿತರು ಹೆಚ್ಚಾಗಿರುವ ಈ ಕ್ಷೇತ್ರ ಇಬ್ಬರೂ ನಾಯಕರಿಗೂ ಪ್ರತಿಷ್ಠೆ ಪಂದ್ಯ.ಯಡ್ಡಿ ಗೆದ್ದು ಬಿಜೆಪಿ ರಾಜ್ಯಾದ್ಯಂತ ಜಯಭೇರಿ ಬಾರಿಸಿದರೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವುದು ಖಚಿತ. ಯಡಿಯೂರಪ್ಪ ಅವರಿಗೆ ಅದೃಷ್ಠ ಕೈಕೊಟ್ಟರೆ ಮುಖಭಂಗ ಖಂಡಿತ.
ಸಜ್ಜನ ರಾಜಕಾರಣಿ ಎಂದೇ ಜನಜನಿತವಾಗಿರುವ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಈ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆ ಹರಪನಹಳ್ಳಿ ಮತಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇವರ ವಿರುದ್ಧ ಬಳ್ಳಾರಿ ಗಣಿಧಣಿ, ಸಂಸದ ಜಿ.ಕರುಣಾಕರರೆಡ್ಡಿ ದುಡ್ಡಿನ ಥೈಲಿ ಹಿಡಿದುಕೊಂಡು ಮತ ಕೀಳಲಾರಂಭಿಸಿದ್ದಾರೆ. ಹೂವಿನಹಡಗಲಿ ಮೀಸಲು ಕ್ಷೇತ್ರವಾಗಿದ್ದರಿಂದ ಪ್ರಕಾಶ್ ಹರಪನಹಳ್ಳಿಯಲ್ಲಿ ಸ್ಪರ್ಧಿಸಬೇಕಾಯಿತು. ಪ್ರಕಾಶ್ ಅವರನ್ನು ಮಟ್ಟ ಹಾಕಲು ರೆಡ್ಡಿ ಸಹೋದರರು ಕರುಣಾಕರರೆಡ್ಡಿಯನ್ನು ತಂದು ನಿಲ್ಲಸಿವೆ. ಪ್ರಕಾಶ್ ಅಂಥ ಚರಿಷ್ಮಾ ಉಳ್ಳ ನಾಯಕನಲ್ಲದಿದ್ದರೂ, ತಟಗು ಮೌಲ್ಯವನ್ನು ಉಳಿಸಿಕೊಂಡಿರುವ ರಾಜಕಾರಣಿ. ಈ ಭಾರಿ ಅವರು ಸೋತರೆ ಮುಂದಿನ ದಿನಗಳಲ್ಲಿ ರಾಜಕಾರಣದಿಂದ ಹಿಮ್ಮುಖರಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇನ್ನೂ ಕರುಣಾಕರರೆಡ್ಡಿ ಅವರಿಗೆ ದುಡ್ಡಿ ದರ್ಪವೇ ಹೆಚ್ಚು, ಹಣದಿಂದ ಏನನ್ನದರೂ ಕೊಳ್ಳಬಹುದು ಎನ್ನುವುದು ಇವರ ಅಗ್ರ ಚಿಂತನೆ. ಈಗಾಗಲೇ ಮತಗಳನ್ನು ಕೊಂಡುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರತೊಡಗಿವೆ. ಗೆದ್ದರೆ ಅವರಿಗೆ ಲಾಭ. ಸೋತರೆ ಕಳೆದುಕೊಳ್ಳುವುದು ಏನೂ ಇಲ್ಲ.
ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕ್ಷೇತ್ರ ರಾಮನಗರ ತಗೆದುಕೊಂಡರೆ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಅವರಿಗೆ ಶ್ರೀರಕ್ಷೆ. ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿರುವ ಹೆಗ್ಗಳಿಕೆಯೂ ಅವರಿಗೆ ಸಲ್ಲುತ್ತದೆ. ಆದ್ದರಿಂದ ಗೆಲುವು ನಿಶ್ಚಿತ. ಗೌಡರ ಕುಟುಂಬದ ಸದಸ್ಯರನ್ನು ಮಹಿಳಾ ಅಭ್ಯರ್ಥಿಯಿಂದ ಸೋಲಿಸಲು ಸಾಧ್ಯ ಎನ್ನುವ ಭವಿಷ್ಯಕ್ಕೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತು ಬಹುಶಃ ಸಿಗಲಿಕ್ಕಿಲ್ಲ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಪುತ್ರಿ ಮಮತಾ ನಿಚ್ಛಾನಿ ಕಣಕ್ಕಿಳಿಸಿರುವ ಕಾಂಗ್ರೆಸ್ ಗೆ ಯಾವುದೇ ಲಾಭ ಆಗುವುದಿಲ್ಲ.
ದುಡ್ಡಿನ ದೊರೆಗಳ ಹಣಾಹಣಿ ಎಂದೇ ಬಿಂಬತವಾಗಿರುವ ಬಳ್ಳಾರಿ ನಗರ ಕ್ಷೇತ್ರ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಅದೂ ಅಲ್ಲದೇ ಕೊನೆ ಗಳಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿ ದಿವಾಕರ್ ಬಾಬು ಮತ್ತೆ ಕಾಂಗ್ರೆಸ್ ಸೇರಿರುವುದು ಚುನಾವಣೆ ಮಟ್ಟಿಗೆ ಬಳ್ಳಾರಿ ಅತೀ ಸೂಕ್ಷ್ಮ ಪ್ರದೇಶವಾಗಿದೆ. ಇಬ್ಬರಲ್ಲೂ ರೊಕ್ಕದ ಕೊಪ್ಪರಿಗೆ ತುಂಬಿದೆ. ಜಿದ್ದಾಜಿದ್ದಿ ನಡೆಯುವುದು ಖಂಡಿತ. ಬಿಜೆಪಿ ಮೇಲುಗೈ ಸಾಧಿಸಲಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ, ಫಲಿತಾಂಶ ಮಾತ್ರ ಉಭಯ ಅಭ್ಯರ್ಥಿಗಳಿಗೆ ಪ್ರತಿಷ್ಠೆ ಪ್ರಶ್ನೆಯಾಗಿದೆ. ಉಳಿದಂತೆ ಸಿದ್ಧರಾಮಯ್ಯ ಸ್ಪರ್ಧಿಸಿರುವ ವರುಣಾ, ಎಚ್.ಕೆ.ಪಾಟೀಲ್ ಅವರ ಗದಗ, ಎಚ್.ಡಿ.ರೇವಣ್ಣ ಅವರ ಹೊಳೆನರಸೀಪುರ, ಜೇವರ್ಗಿಯಿಂದ ಧರಂ ಸಿಂಗ್ ,ಮಲ್ಲಿಕಾರ್ಜುನ ಖರ್ಗೆ ಅವರ ಚಿತ್ತಾಪುರ ಮೀಸಲು ಕ್ಷೇತ್ರಗಳೆಡೆಗೆ ಮತದಾರರ ಚಿತ್ತ ನೆಟ್ಟಿದೆ.