ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕಾರ್ಮಿಕರು
ನಂಜನಗೂಡು,ಮೇ 13: ಕೆಲಸ ಖಾಯಂಗೊಳಿಸಲಿಲ್ಲ ಎಂದು ಆಕ್ರೋಶಗೊಂಡ ಬನ್ನಾರಿ ಅಮ್ಮನ್ ಕಾರ್ಖಾನೆಯ 8 ಜನ ಕಾರ್ಮಿಕರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಜರುಗಿದೆ. ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ಕಳೆದ ಹಲವು ವರ್ಷಗಳಿಂದ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಸೇವೆ ಖಾಯಂ ಮಾಡುವಂತೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಕಾರ್ಖಾನೆಯ ಆಡಳಿತ ಮಂಡಳಿ ಕಾರ್ಖಾನೆಯಲ್ಲಿ ಕೆಲಸ ಮಾಡುವ ಎಲ್ಲ ಕಾರ್ಮಿಕರ ಕೆಲಸ ಖಾಯಂಗೊಳಿಸಿ ಕೇವಲ ಎಂಟು ಜನರ ಕೆಲಸವನ್ನು ಮಾತ್ರ ಖಾಯಂಗೊಳಿಸಿರಲಿಲ್ಲ. ಉಳಿದ ಎಂಟು ಮಂದಿ ಕೆಲಸವನ್ನು ಖಾಯಂಗೊಳಿಸುವಂತೆ ಮಾಡಿಕೊಂಡಿದ್ದ ಮನವಿಗೆ ಆಡಳಿತ ಮಂಡಳಿ ನಿರ್ಲಕ್ಷ ವಹಿಸಿದ್ದರಿಂದ ಮಂಗಳವಾರ ಎಂಟು ಜನ ಕಾರ್ಮಿಕರು ಉಗ್ರ ಸ್ವರೂಪದ ಪ್ರತಿಭಟನೆಗೆ ಮುಂದಾಗಿದ್ದರು. ಅದಕ್ಕೂ ಬಗ್ಗದ ಆಡಳಿತ ಮಂಡಳಿಯ ಕ್ರಮದಿಂದ ಬೇಸತ್ತು ಕ್ರಿಮನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರಲ್ಲಿ ಒಬ್ಬನ ಸ್ಥಿತಿ ಚಿಂತಾಚನಕವಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ತಿಳಿಯುತ್ತಿದ್ದಂತೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಪ್ರತಿಭಟನಾಕಾರ ಪರವಾಗಿ ಸಂಧಾನ ಮಾತುಕತೆ ನಡೆಸಿರುವ ಪೊಲೀಸರು ಇನ್ನೆರಡು ದಿನದಲ್ಲಿ ಸಮಸ್ಯೆಯನ್ನು ಇತ್ಯರ್ಥ ಪಡಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಳ್ಳುವ ಲಕ್ಷಣಗಳಿವೆ. ಕಾರ್ಮಿಕರ ಶೋಷಣೆಯಡಿ ಪ್ರಕರಣ ದಾಖಲಾಗಿದೆ.
(ದಟ್ಸ್ ಕನ್ನಡ ವಾರ್ತೆ)