ಮತದಾನ ಆರಂಭ; ಅಲ್ಲಲ್ಲಿ ಕೈಕೊಟ್ಟ ಮತ ಯಂತ್ರಗಳು
ಬೆಂಗಳೂರು, ಮೇ 10: ಮೊದಲ ಹಂತದ ಚುನಾವಣೆಗೆ ಮತದಾನ ಶನಿವಾರ ಬೆಳಗ್ಗೆ 7ಗಂಟೆಯಿಂದ ಆರಂಭವಾಗಿದ್ದು ಹೊಳೆನರಸೀಪುರದಲ್ಲಿ ದೇವೇಗೌಡರ ಕುಟುಂಬ ಸೇರಿದಂತೆ ವಿಜಯನಗರ ದಲ್ಲಿ ಎಂ.ಕೃಷ್ಣಪ್ಪ, ತುಮಕೂರಿನಲ್ಲಿ ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮಿಗಳು ತಮ್ಮ ಮತ ಚಲಾಯಿಸಿದರು.
ತುಮಕೂರಿನಲ್ಲಿ 700 ರಿಂದ 800 ಮತದಾರರ ಹೆಸರುಗಳು ಮತಪಟ್ಟಿಯಲ್ಲಿ ಕಾಣೆಯಾಗಿವೆ. ತುಂಬು ಉತ್ಸಾಹದಿಂದ ಮತ ಚಲಾಯಿಸಲು ಬಂದ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳು ನಾಪತ್ತೆ ಯಾಗಿರುವುದನ್ನು ಕಂಡು ತೀವ್ರ ನಿರಾಸೆ ಉಂಟಾಯಿತು. ಇದರಲ್ಲಿ ರಾಜಕಾರಣಿಗಳ ಕೈವಾಡ ಇರಬಹುದೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ರೇವಣ್ಣ ಹಾಗೂ ಅವರ ಪತ್ನಿ ಭವಾನಿ ರೇವಣ್ಣ ಹೊಳೆನರಸೀಪುರದಲ್ಲಿ ತಮ್ಮ ಮತ ಚಲಾಯಿಸಿದರು. ರೇವಣ್ಣ ತಮ್ಮ ಮತಚಲಾಯಿಸುವ ವೇಳೆ ಮತಗಟ್ಟೆ ಇಟ್ಟಿದ್ದ ಮೇಜನ್ನು ಪೂರ್ವ ದಿಕ್ಕಿಗೆ ತಿರುಗಿಸಿಕೊಂಡು ವಾಸ್ತು ಪ್ರಕಾರ ಮತ ಚಲಾಯಿಸಿದರು.
ಅಲ್ಲಲ್ಲಿ ಎಲಕ್ಟ್ರಾನಿಕ್ ಮತ ಯಂತ್ರಗಳು ಕೈಕೊಟ್ಟಿರುವ ಪ್ರಕರಣಗಳು ದಾಖಲಾಗಿವೆ. ಯಲಹಂಕ ಮಾರುತಿನಗರ ಮತಗಟ್ಟೆಯ ಎಲೆಕ್ಟ್ರಾನಿಕ್ ಮತಯಂತ್ರ ಕೈಕೊಟ್ಟು ಮತದಾರರು ಪರದಾಡುವಂತಾಯಿತು. ಮತದಾರರ ಪಟ್ಟಿಯಲ್ಲಿ ಹೆಸರುಗಳಿಲ್ಲದಿರುವುದು ಅಲ್ಲಲ್ಲಿ ಪತ್ತೆಯಾಗಿದೆ. ಆದರೆ ಇದುವರೆಗೂ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಮತದಾನ ಬಹುತೇಕ ಶಾಂತಿಯುತವಾಗಿ ನಡೆಯುತ್ತಿದೆ. ಮಧ್ಯಾಹ್ನದ ವೇಳೆಗೆ ಶೇ.26ರಷ್ಟು ಮತದಾನ ದಾಖಲಾಗಿದೆ.
ಪುಲಕೇಶಿನಗರ ಕ್ಷೇತ್ರದಲ್ಲಿ ರೋಷನ್ಬೇಗ್, ಬಿಟಿಎಂ ಲೇಔಟ್ನಲ್ಲಿ ಸ್ಪರ್ಧಿಸಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ ಚಿಕ್ಕಪೇಟೆಯಲ್ಲಿ ಹಾಗೂ ಮಧುಗಿರಿ ಕ್ಷೇತ್ರದಲ್ಲಿ ಮಾಜಿ ಸಚಿವ ಡಾ. ಜಿ.ಪರಮೇಶ್ವರ್ ತಮ್ಮ ಪತ್ನಿಯೊಂದಿಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.
(ದಟ್ಸ್ಕನ್ನಡ ವಾರ್ತೆ)