ನಾನೇ ಕಿಂಗ್, ಕಿಂಗ್ ಮೇಕರ್ ಅಲ್ಲವೇ ಅಲ್ಲ: ಕುಮಾರ
ಬೆಂಗಳೂರು, ಮೇ 10 : "ನಾನೇ ಕಿಂಗ್, ಕಿಂಗ್ ಮೇಕರ್ ಆಗಲು ನನಗೆ ಇಷ್ಟವಿಲ್ಲ" ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಗಡಿ ಕ್ಷೇತ್ರದ ಕೇತಗಾನಹಳ್ಳಿಯಲ್ಲಿ ಚಲಾಯಿಸಿ ವಿಶ್ವಾಸದಿಂದ ಆಡಿರುವ ಮಾತಿದು. ಚುನಾವಣೆ ಪೂರ್ವ ನಡೆಸುವ ಸಮೀಕ್ಷೆಯಲ್ಲಿ ನಮಗೆ ನಂಬಿಕೆಯಿಲ್ಲ. ಆದ್ದರಿಂದ ಈ ಬಾರೀ ಜೆಡಿಎಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ರಾಜ್ಯದ ಜನತೆ ಯಾರಿಗೆ ತಮ್ಮ ಮತ ನೀಡಬೇಕು ಎನ್ನುವುದನ್ನು ಈಗಾಗಲೇ ನಿರ್ಧಾರ ಮಾಡಿಕೊಂಡಿದ್ದಾರೆ. 20 ತಿಂಗಳಲ್ಲಿ ನಾವು ನೀಡಿದ ಜನಪರ ಆಡಳಿತವೇ ನಮಗೆ ಶ್ರೀರಕ್ಷೆಯಾಗಿದೆ. ರಾಜ್ಯಾದ್ಯಂತ ನಾನು ಏಕಾಂಗಿಯಾಗಿ ಪ್ರಚಾರ ಮಾಡುವ ಸಂದರ್ಭದಲ್ಲಿ ವಾಸ್ತವಾಂಶ ನನ್ನ ಅರಿವಿಗೆ ಬಂದಿದೆ. ಆದ್ದರಿಂದ ಈ ಬಾರೀ ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ಜನತೆ ನೀಡಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಬಿಜೆಪಿಯ ರಾಷ್ಟ್ರ ನಾಯಕರೂ ರಾಜ್ಯ ಪ್ರವಾಸ ಮಾಡಿದ್ದಾರೆ. ಸ್ಟಾರ್ ಕ್ಯಾಂಪೆನರ್ ಎಂದು ಬಿಂಬಿಸಲಾಗಿರುವ ಅನೇಕರು ಕೂಡಾ ಬಂದು ಹೋಗಿದ್ದಾರೆ. ಆದರೆ ಒಂದು ವಿಷಯ ಗಮನದಲ್ಲಿ ಇರಲಿ, ಜನತೆಯ ನಿರ್ಧಾರವೇ ಬೇರೆಯಾಗಿರುವುರಿಂದ ಇಂತಹ ಯಾವ ಗಿಮಿಕ್ ಗಳು ಪ್ರಯೋಜನಕ್ಕೆ ಬರುವುದಿಲ್ಲ ಎಂದು ಕುಮಾರಸ್ವಾಮಿ ಇತರ ಪಕ್ಷಗಳನ್ನು ಲೇವಡಿ ಮಾಡಿದರು.
ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಪ್ರತಿಪಾದಿಸಿದ ಅವರು, ರಾಜ್ಯದ ಜನತೆ ಈ ಬಾರಿ ನಮಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದರು. ಜೆಡಿಎಸ್ ನಾಶ ಮಾಡಲು ಕೆಲವರು ಪಣತೊಟ್ಟಿದ್ದಾರೆ. ಆದರೆ ಅವರ ಆಸೆ ಈಡೇರುವುದಿಲ್ಲ ಎಂದು ಟೀಕಿಸಿದ ಅವರು, ಈ ಚುನಾವಣೆಯಲ್ಲಿ ಅಂಥವರಿಗೆ ಜನತೆಯೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಆಂತರಿಕ ಕಚ್ಚಾಟದಿಂದ ತತ್ತರಿಸಿ ಹೋಗಿದೆ. ಜತೆಗೆ ಜನತೆ ಆ ಪಕ್ಷದಿಂದ ಭಾರೀ ನಿರಾಶೆ ಅನುಭವಿಸಿದ್ದಾರೆ ಎಂದು ವ್ಯಂಗ್ಯವಾಡಿದರು. ಯಾವ ಕಾರಣಕ್ಕೂ ಕೇಸರಿ ಪಕ್ಷ ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)