ನಮ್ಮ ಪಕ್ಷಕ್ಕೆ ವರವಾಗಲಿದೆ ಚಾಮರಾಜಪೇಟೆ: ಚಂಪಾ
ಬೆಂಗಳೂರು, ಮೇ 7: ನೆಲ, ಜಲ, ಭಾಷೆಯ ಹಿತ ಕಾಪಾಡಲು ಸ್ವಾಭಿಮಾನಿ ಕನ್ನಡ ಪಕ್ಷ ಸದಾ ಮುಂದಿರುತ್ತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ್ ಹೇಳಿದ್ದಾರೆ.
ರಾಜ್ಯದ ಹಿತ ಕಾಪಾಡಲು ಪ್ರಾದೇಶಿಕ ಪಕ್ಷವೊಂದರ ಅಗತ್ಯವಿತ್ತು. ಅದು ಈಡೇರಿದೆ. ಇನ್ನು ಮುಂದೆ ಎಲ್ಲಾ ಚುನಾವಣೆಗಳಲ್ಲಿ ಪಕ್ಷ ಸ್ಪರ್ಧೆ ನಡೆಸಲಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಸಂವಾದದಲ್ಲಿ ಅವರು ತಿಳಿಸಿದರು. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವ ಸಮಯದಲ್ಲಿ ಗಂಟೆ ಕಟ್ಟಲಾಗಿದೆ. ಕನ್ನಡದ ಹಿತ ಕಾಪಾಡುವುದೇ ಪಕ್ಷದ ಉದ್ದೇಶ ಎಂದು ಚಂಪಾ ಘಂಟಾಘೋಷವಾಗಿ ಹೇಳಿದರು.
ಮುಂದಿನ ದಿನಗಳಲ್ಲಿ ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಸ್ವಾಭಿಮಾನಿ ಕನ್ನಡ ಪಕ್ಷ ಸ್ಪರ್ಧಿಸಲಿದೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ಕಳೆದ ಮೂರು ದಿನಗಳಿಂದ ಪಾದಯಾತ್ರೆ ನಡೆಸಲಾದ್ದು ನಮ್ಮ ಪಕ್ಷಕ್ಕೆ ವ್ಯಾಪಕ ಬೆಂಗಲ ವ್ಯಕ್ತವಾಗಿದೆ. ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್, ಜೆಡಿ(ಎಸ್) ಹಾಗೂ ನಾಲ್ಕು ಮಂದಿ ಪಕ್ಷೇತರ ಅಭ್ಯರ್ಥಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ಅವರ ಮತಗಳು ಹರಿದು ಹಂಚಿಹೋಗಿ ನಮ್ಮ ಪಕ್ಷಕ್ಕೆ ವರವಾಗಿ ಪರಿಣಮಿಸಲಿದೆ ಎಂದು ಚಂಪಾ ಸ್ವಾಭಿಮಾನ ವ್ಯಕ್ತಪಡಿಸಿದರು.
(ದಟ್ಸ್ಕನ್ನಡ ವಾರ್ತೆ)