ಮಹಿಳಾ ಮೀಸಲಾತಿಗೆ ಸಮಾಜವಾದಿ ಪಕ್ಷದ ವಿರೋಧ
ನವದೆಹಲಿ,ಮೇ 6: ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಶೇ.33 ಮಹಿಳಾ ಮೀಸಲಾತಿ ಮಸೂದೆಯನ್ನು ಸಮಾಜವಾದಿ ಪಕ್ಷದ ಸಂಸದರ ವಿರೋಧದ ನಡುವೆ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಮಂಗಳವಾರ ಮಂಡಿಸಿತು.
ಶೇ.33 ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಏಕಕಾಲದಲ್ಲಿ ಜಾರಿಗೆ ಬರುವಂತೆ ರಾಜ್ಯ ಸಭೆಯಲ್ಲಿ ಇಂದು ಮಂಡಿಸಲಾಯಿತು. ಮಹಿಳಾ ಮಸೂದೆ ಜಾರಿ ಕ್ರಮವನ್ನು ವಿರೋಧಿಸಿ ಸಮಾಜವಾದಿ ಪಕ್ಷದ ಸದಸ್ಯರು ಸರ್ಕಾರದ ಮೇಲೆ ತೀವ್ರವಾಗಿ ದಾಳಿ ನಡೆಸಿದ್ದರಿಂದ ಕೆಲ ಕಾಲ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು.
ಸಂವಿಧಾನದ 108ನೇ ಕಲಂ ಅಡಿಯಲ್ಲಿ ಶೇ.33 ರಷ್ಟು ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತು ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಜಾರಿಗೆ ಅಂಗೀಕಾರ ನೀಡಲು ಕೇಂದ್ರದ ಕಾನೂನು ಸಚಿವ ಎಚ್.ಆರ್. ಭಾರದ್ವಾಜ್ ಮುಂದಾದಾಗ, ಸಮಾಜವಾದಿ ಪಕ್ಷದ ಕಾರ್ಯಕರ್ತರು ಭಾರಿ ಪ್ರಮಾಣದಲ್ಲಿ ವಿರೋಧಿಸಿದರು. ಒಂದು ಹಂತದಲ್ಲಿ ಸಮಾಜವಾದಿ ಪಕ್ಷದ ಸದಸ್ಯರ ನೇತೃತ್ವ ವಹಿಸಿದ್ದ ಅಬು ಅಸಿಮ್ ಅಸ್ಮಿ ಮಹಿಳಾ ಮೀಸಲಾತಿ ಕಡತಗಳನ್ನು ಕಸಿದುಕೊಳ್ಳಲು ಮುಂದಾದಾಗ ರಾಜ್ಯಸಭೆಯಲ್ಲಿ ಕೆಲ ಹೊತ್ತು ಅಶಾಂತಿ ವಾತಾವರಣ ಉಂಟಾಯಿತು.
ಸಚಿವರ ಆಸನದ ಕಡೆಗೆ ಲಗ್ಗೆ ಹಾಕಿದ ಸಮಾಜವಾದಿ ಪಕ್ಷದ ಸಚಿವರು ಕಡತಗಳನ್ನು ಕಸಿಯಲು ಯತ್ನಿಸಿದರು.ಈ ಸಂದರ್ಭದಲ್ಲಿ ಅಡ್ಡ ಬಂದ ಕೇಂದ್ರದ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ರೇಣುಕಾ ಚೌಧರಿ, ಅಸ್ಮಿ ಯನ್ನು ತಡೆಯುವಲ್ಲಿ ಸಫಲರಾದರು. ಮಹಿಳಾ ಸಂಸದರಾದ ಜಯಂತಿ ನಟರಾಜನ್, ಅಲ್ಕಾ ಬಲರಾಂ, ಅಂಬಿಕಾ ಸೋನಿ ಮತ್ತು ಕುಮಾರಿ ಶೈಲಜಾ ಅವರುಗಳು ಸಚಿವ ಭಾರದ್ವಾಜ್ ಅವರನ್ನು ಸುತ್ತುವರೆದಿದ್ದರಿಂದ ಕಡತಗಳನ್ನು ಕಸಿಯಲು ಸಾಧ್ಯವಾಗಲಿಲ್ಲ.
ಮಂಗಳವಾರ ಮಧ್ಯಾಹ್ನ ನಡೆದ ಸದನದಲ್ಲಿ ಈ ಕೋಲಾಹಲ ಉಂಟಾಗಿದ್ದು, ಜೆಡಿ(ಯು) ಸಂಸದರು ಸಹ ಮಹಿಳಾ ಮೀಸಲಾತಿ ಜಾರಿಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಶಿವಸೇನೆ ಮುಖಂಡ ಬಾಳ ಠಾಕ್ರೆ ವಿರುದ್ಧ ಘೋಷಣೆ ಕೂಗಿದರು. ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಯಶವಂತಸಿನ್ಹಾ ಮತ್ತಿತರ ಹಿರಿಯ ಸಂಸದರು ಘಟನೆಗೆ ಸಾಕ್ಷಿಯಾದರು.
(ಯುಎನ್ಐ)