ಕಾಂಗ್ರೆಸ್ ಟಿಕೆಟ್ ಹಂಚಿಕೆ; ಯಾವ ಜಾತಿಗೆ ಎಷ್ಟೆಷ್ಟು?
ಬೆಂಗಳೂರು,ಮೇ 6: ಕಾಂಗ್ರೆಸ್ ಪಕ್ಷ ಹಿಂದುಳಿದವರ ಹಿತಕ್ಕೆ ಹೋರಾಡುವ ಪಕ್ಷ ಎಂದೇ ಖ್ಯಾತಿ ಹೊಂದಿದೆ.ಅದರಂತೆ ಎಲ್ಲ ವರ್ಗಗಳಿಗೂ ಸರಿಯಾಗಿ ಟಿಕೆಟ್ ನ್ನು ಹಂಚಿಕೆ ಮಾಡಿದೆ. ರಾಜ್ಯದಲ್ಲಿ ಜನಸಂಖ್ಯೆ ಆಧಾರದಲ್ಲಿ ಪ್ರಬಲ ಕೋಮುಗಳು ಎನ್ನಲಾದ ಲಿಂಗಾಯತ ಮತ್ತು ಒಕ್ಕಲಿಗ ಜನಾಂಗಕ್ಕೆ ಸೇರಿದ ಅಭ್ಯರ್ಥಿಗಳು ಇದರಲ್ಲಿ ಸಿಂಹ ಪಾಲು ಪಡೆದುಕೊಂಡಿದ್ದಾರೆ.
ಈ ಕುರಿತು ಕೆಪಿಸಿಸಿ ಕಚೇರಿಯಿಂದ ಬಂದಿರುವ ಅಧಿಕೃತ ಸುದ್ದಿಯ ಪ್ರಕಾರ, ಕಾಂಗ್ರೆಸ್ ಈ ಬಾರಿ ಸ್ಪರ್ಧಿಸುವ 222 ಕ್ಷೇತ್ರಗಳಲ್ಲಿ 44 ಲಿಂಗಾಯತ ಅಭ್ಯರ್ಥಿಗಳು ಹಾಗೂ ಒಕ್ಕಲಿಗ ಸಮುದಾಯಕ್ಕೆ ಸೇರಿದ 33 ಜನರು ಕಾಂಗ್ರೆಸ್ ಟಿಕೆಟ್ ಪಡೆಯಲು ಯಶಸ್ವಿಯಾಗಿದ್ದಾರೆ. 2004ರ ಚುನಾವಣೆಗೆ ಹೋಲಿಸಿದರೆ ಇದರ ಪ್ರಮಾಣ ಕಡಿಮೆ ಎನ್ನಬಹುದು. ಕಳೆದ ಚುನಾವಣೆಯಲ್ಲಿ 56 ಮಂದಿ ಲಿಂಗಾಯತರು ಹಾಗೂ 37 ಜನ ಒಕ್ಕಲಿಗರು ಟಿಕೆಟ್ ಪಡೆದುಕೊಂಡಿದ್ದರು. ಈ ಬಾರಿ 16 ಜನ ಪರಿಶಿಷ್ಠ ಜಾತಿಗೆ ಸೇರಿದ ಅಭ್ಯರ್ಥಿಗಳಿದ್ದಾರೆ. ಕಳೆದ ಚುನಾವಣೆಯಲ್ಲಿ ಇದರ ಸಂಖ್ಯೆ ಬರೊಬ್ಬರಿ 20 ಆಗಿತ್ತು. ಪರಿಶಿಷ್ಠ ಜಾತಿಗೆ ಸೇರಿದ ವಿವಿಧ ಜನಾಂಗಗಳಿಗೆ ಈ ಸಲ ಬಂಪರ್ ಬಹುಮಾನ ನೀಡಲಾಗಿದ್ದು, ಅದರ ಸಂಖ್ಯೆ 10ಕ್ಕೆ ಏರಿದೆ.
ಅಲ್ಪಸಂಖ್ಯಾತರಿಗೆ ಟಿಕೆಟ್ ಹಂಚಿಕೆಯಲ್ಲಿ ಯಾವ ಬದಲಾವಣೆಯಾಗಿಲ್ಲ, 17 ಮಂದಿ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಟಿಕೆಟ್ ನ್ನು ನೀಡಲಾಗಿದೆ. ಪಕ್ಷಕ್ಕೆ ಪ್ರಮುಖ ಆಧಾರ ಸ್ಥಂಭವಾಗಿರುವ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಈ ಸಲ 60 ಸ್ಥಾನಗಳನ್ನು ಪಡೆಯಲು ಯಶಸ್ವಿಯಾಗಿದ್ದಾರೆ. ಹಿಂದುಳಿದ ಜನಾಂಗದಲ್ಲಿ ಅತೀ ಹೆಚ್ಚು ಅಂದರೆ 16 ಸ್ಥಾನಗಳನ್ನು ಕುರುಬ ಜನಾಂಗ ಪಡೆದುಕೊಂಡಿದೆ. ಆದರೆ ಈಡಿಗರಿಗೆ ಕಳೆದ ಸಲ 11 ಸ್ಥಾನಗಳನ್ನು ನೀಡಲಾಗಿತ್ತು, ಈ ಬಾರಿ ಅವರು ಕೇವಲ 7 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.
ಉಳಿದಂತೆ ಎಲ್ಲ ಜಾತಿಗಳಿಗೂ ಸಮಾನ ಸ್ಥಾನ ಕಲ್ಪಿಸಿರುವ ಕಾಂಗ್ರೆಸ್, ಬಲಿಜ ಜನಾಂಗಕ್ಕೆ 6, ಬಿಲ್ಲವರಿಗೆ-3, ಬೆಸ್ತರಿಗೆ-3, ದೇವಳಿ-1, ಯಾದವ-3, ಗಾಣಿಗ-2, ಮರಾಠಾ-6, ರಜಪೂತ-1, ಉಪ್ಪಾರ-1, ನೇಕಾರ-1, ಕಮ್ಮ-1, ನಾಯ್ಡು-1, ತಿಗಳ-1, ವೈಶ್ಯ-1, ಕ್ರಿಶ್ಚಿಯನ್-2, ಬ್ರಾಹ್ಮಣ-5, ಜೈನ್-2, ರೆಡ್ಡಿ-7, ಕೊಡವ-1 ಹಾಗೂ ಬಂಟ್ ಜನಾಂಗಕ್ಕೆ ಸೇರಿದ 3 ಜನರಿಗೆ ಟಿಕೆಟ್ ಹಂಚಿದೆ. ಈ ಚುನಾವಣೆಯಲ್ಲಿ 11 ಮಹಿಳೆಯರಿಗೆ ಟಿಕೆಟ್ ನ್ನು ನೀಡಿ ಸ್ಪರ್ಧೆಗಿಳಿಸಿದೆ. ಹಾಗೆಯೇ ಶಿಕಾರಿಪುರದಲ್ಲಿ ಸಮಾಜವಾದಿ ಪಕ್ಷಕ್ಕೆ ಬೆಂಬಲ ಸೂಚಿಸಿದೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಬಿ ಫಾರಂ ಗೊಂದಲದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗಿಲ್ಲ ಎಂದು ಕೆಪಿಸಿಸಿ ಮುಖಂಡರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)