ರಂಗೋಲಿ ಕೆಳಗೆ ನುಸುಳುವ ರಾಜಕಾರಣಿಗಳು
ಬೆಂಗಳೂರು, ಏ.30: ಚುನಾವಣೆ ಆಯೋಗ ನೀತಿ ಸಂಹಿತೆಗಳು ಜಾರಿಗೊಳಿಸಲುಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಈ ಕಟ್ಟುಪಾಡುಗಳನ್ನು ಗಾಳಿಗೆ ತೂರುತ್ತಿರುವ ರಾಜಕಾರಣಿಗಳು ರಂಗೋಲಿ ಕೆಳಗೆ ನುಸುಳಿ ಪಾರಾಗುತ್ತಿದ್ದಾರೆ. ಚುನಾವಣೆ ಆಯೋಗದ ಕಣ್ಣು ತಪ್ಪಿಸಿ ಮತದಾರರಿಗೆ ಬುಟ್ಟಿಗೆ ಹಾಕಿಕೊಳ್ಳಲು ಮದ್ಯ, ಸೀರೆ, ರವಿಕೆ,ಮೂಗುತಿ,ವಾಚು, ಕಲರ್ ಟಿವಿ, ಉಂಗುರ ಮೊದಲಾದ ಕಾಣಿಕೆಗಳನ್ನು ಸಲ್ಲಿಕೆಯಾಗುತ್ತಲೇ ಇವೆ.
ಆಯೋಗದ ಕಣ್ಣುತಪ್ಪಿಸಿ ಕಾಣಿಕೆಗಳನ್ನು ಸಮರ್ಪಿಸಿ ಮತದಾರ ಪ್ರಭುವನ್ನು ಒಲಿಸಿಕೊಳ್ಳಲು ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. 'ಟೋಕನ್ ಸಿಸ್ಟಂ' ಮೂಲಕ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳು ಅಡ್ಡದಾರಿ ಹಿಡಿಯುತ್ತಿದ್ದಾರೆ. ಇದಕ್ಕಾಗಿ ಏಜೆಂಟರುಗಳನ್ನು ನೇಮಿಸಿಕೊಂಡಿದ್ದಾರೆ.
ತಮ್ಮ ಬೆಂಬಲಿಗರಿಗೆ ಹಾಗೂ ದಿನವಿಡೀ ಕೆಲಸ ಮಾಡುವವರಿಗೆ ಸಂಜೆಯಾಗುತ್ತಿದ್ದಂತೆ ಬಾರ್ಗಳಿಗೆ ಟೋಕನ್ ನೀಡಲಾಗುತ್ತದೆ. ಟೋಕನ್ ಪಡೆದವರು ಕಂಠಪೂರ್ತಿ ಕುಡಿದು ಉರುಳಾಡಬಹುದು. ಬಹುತೇಕ ಬಾರ್ ಮಾಲೀಕರು ಕಣದಲ್ಲಿರುವ ಅಭ್ಯರ್ಥಿಗಳ ಬೆಂಬಲಿಗರೇ ಆಗಿರುತ್ತಾರೆ. ಅಕ್ರಮ ಮದ್ಯ ವಿತರಿಸಿ ಆಯೋಗದ ಕೆಂಗಣ್ಣಿಗೆ ಗುರಿಯಾಗುವುದಕ್ಕಿಂತ ಬಾರ್ಗಳಿಗೆ ಟೋಕನ್ ವಿತರಿಸುವುದೇ ಸೂಕ್ತ ಮಾರ್ಗ ಎಂಬುದು ಇವರ ಕುಟಿಲೋಪಾಯ. ಪ್ರತಿ ದಿನ ಬಾರ್ಗಳ ಟೋಕನ್ಗಳು ಬದಲಾಗುತ್ತಿರುತ್ತವೆ.
ಇನ್ನು ಮನೆಮನೆಗೆ ಹೋಗಿ ಮತಯಾಚಿಸುವ ಅಭ್ಯರ್ಥಿಗಳ ಕತೆಯೇ ಬೇರೆ. ಮತಯಾಚಿಸಲು ಹೋಗುವ ಅಭ್ಯರ್ಥಿಗಳು ಕುಟುಂಬದಲ್ಲಿರುವ ಮತದಾರರನ್ನು ಪರಿಗಣಿಸಿ ವೋಚರ್ಗಳು, ಕೂಪನ್ಗಳನ್ನು ವಿತರಿಸುತ್ತಾರೆ. ಸೀರೆ,ಓಲೆ,ಜುಮುಕಿ,ಮೂಗುತಿಗಳ ಟೋಕನ್ ಹಾಗೂ ಕೂಪನ್ಗಳು ಎಗ್ಗಿಲ್ಲದಂತೆ ವಿತರಣೆಯಾಗುತ್ತವೆ.
ಇದಕ್ಕಿಂತಲೂ ವಿಭಿನ್ನ ಅಂದರೆ ಕೊಳಗೇರಿಗಳ ಕತೆ. ಹೆಂಡ, ಹಣ ಇಲ್ಲದೆ ಕೊಳಗೇರಿಗಳಿಗೆ ಅಡಿ ಇಡುವಂತೆಯೇ ಇಲ್ಲ. ಸೀರೆ, ದಿನಸಿಗಳು ಸೇರಿದಂತೆ ದುಡ್ಡು ವಿತರಣೆಯಾಗುತ್ತದೆ. ನಗರಗಳಿಗಿಂತಲೂ ಗ್ರಾಮೀಣ ಪ್ರದೇಶದ ಮತದಾರರು ಈ ರೀತಿಯ ಆಮೀಷಗಳಿಗೆ ಬಲಿಯಾಗುತ್ತಿದ್ದಾರೆ. ಮತದಾರರಿಗೆ ವಿತರಿಸಲು ಹೊತ್ತೊಯ್ಯ್ಯುತ್ತಿದ್ದ ಅಕ್ರಮ ಮದ್ಯ ಹಾಗೂ ಸೀರೆಗಳ ಲಾರಿಗಳನ್ನು ಪೊಲೀಸರು ಅಲ್ಲಲ್ಲಿ ವಶಪಡಿಸಿಕೊಳ್ಳುತ್ತಿದ್ದಾರೆ. ಆದರೆ ಇದನ್ನು ಬಿಡಿಸಿಕೊಳ್ಳಲು ಯಾರೂ ಬರುವುದಿಲ್ಲ. ವಾರಸುದಾರರಿಲ್ಲ ಇವನ್ನು ಪೊಲೀಸರು ಸುಮ್ಮನೆ ಕಾವಲು ಕಾಯಬೇಕು ಅಷ್ಟೆ.
(ದಟ್ಸ್ಕನ್ನಡ ವಾರ್ತೆ)