ಅಂತ್ಯವಾದ ಷರೀಫ್ರ ರಾಜೀನಾಮೆ ಪ್ರಹಸನ
ನವದೆಹಲಿ, ಏ.27: ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ನೀಡಿದ್ದ ರಾಜೀನಾಮೆ ಅವರು ಭಾನುವಾರ ಹಿಂದಕ್ಕೆ ಪಡೆದಿದ್ದಾರೆ.
ನವದೆಹಲಿಯಲ್ಲಿ ಇಂದು ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸೋನಿಯಾ ಅವರು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಹಾಗೆಯೇ ಷರೀಫ್ ಅವರ ಬೇಡಿಕೆಗಳಿಗೆ ಸ್ಪಂದಿಸಲು ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ. ಇದರಿಂದ ಸಂತೃಪ್ತರಾದ ಷರೀಫ್ ಸಾಹೇಬರು ಪಕ್ಷಕ್ಕೆ ನೀಡಿದ್ದ ರಾಜೀನಾಮೆಯನ್ನು ವಾಪಸ್ಸು ಪಡೆದಿದ್ದಾರೆ.
ತಮ್ಮ ಮೊಮ್ಮಗನಿಗೆ ಪಕ್ಷದ ಟಿಕೆಟ್ ನೀಡದಿರುವುದು ರಾಜೀನಾಮೆಗೆ ಕಾರಣವಲ್ಲ ಎಂದಿದ್ದ ಅವರು, ವಾಸ್ತವ ವಿಷಯವನ್ನು ಪಕ್ಷದ ಅಧ್ಯಕ್ಷರಿಗೆ ತಿಳಿಸುವುದಾಗಿ ಹೇಳಿದ್ದರು. ಇಂದು ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ರಾಜೀನಾಮೆ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸುವುದಾಗಿ ಈ ಮುಂಚಿತವಾಗಿಯೇ ಅವರು ತಿಳಿಸಿದ್ದರು. ಹಾಗಾಗಿ ಷರೀಫರ ರಾಜೀನಾಮೆ ಪ್ರಹಸನ ಕುತೂಹಲ ಮೂಡಿಸಿತ್ತು. ಬಂಡಾಯವನ್ನು ಹತ್ತಿಕ್ಕಲು ಕಾಂಗ್ರೆಸ್ ಹರಸಾಹಸ ಮಾಡುತ್ತಿದೆ ಎನ್ನುವುದು ಇದರಿಂದ ಸಾಬೀತಾಗಿದೆ.
(ಏಜೆನ್ಸೀಸ್)