ಗುರುಪಾದಪ್ಪ ಮುಂದಿನ ನಡೆ ಏ.30ರಂದು ನಿರ್ಧಾರ
ಬೆಂಗಳೂರು, ಏ.27: ಕಾಂಗ್ರೆಸ್ನಲ್ಲಿ ಬಂಡಾಯಗಾರರ ಆಟ ಮುಂದುವರೆದಿದೆ. ಕಾಂಗ್ರೆಸ್ ತನ್ನ ಇನ್ನೊಂದು ವಿಕೆಟನ್ನು ಇಂದು ಕಳೆದುಕೊಂಡಿದೆ. ಮೂರು ಬಾರಿ ಸಚಿವರಾಗಿದ್ದ ಗುರುಪಾದಪ್ಪನಾಗಮಾರಪಲ್ಲಿ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅವರು ರಾಜೀನಾಮೆ ನೀಡಿದ್ದಾರೆ.
ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ಮುಖಂಡ ಎಂದು ಬಿಂಬಿತವಾಗಿರುವ ಮಾಜಿ ಸಚಿವ ನಾಗಮಾರಪಲ್ಲಿ ಅವರ ರಾಜೀನಾಮೆಯಿಂದ ಪಕ್ಷದಲ್ಲಿ ಆತಂಕದ ಮೋಡ ಕವಿದಿದೆ. ಬೀದರ್ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಸಿಗದೆ ಅತೃಪ್ತರಾದ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಏ.30ರಂದು ತಿಳಿಸುವುದಾಗಿ ಹೇಳಿದ್ದಾರೆ.
ಸದ್ಯಕ್ಕೆ ತಾವು ಯಾವುದೇ ಪಕ್ಷ ಸೇರುವುದಿಲ್ಲ ಎಂದಿರುವ ಅವರು, ತಮ್ಮ ಮುಂದಿನ ನಡೆಯನ್ನು ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ಬಂಡಾಯದ ಹೊಡೆತಕ್ಕೆ ಕಂಗಾಲಾಗಿರುವ ಕಾಂಗ್ರೆಸ್ ಗುರುಪಾದಪ್ಪ ರಾಜೀನಾಮೆಯಿಂದ ಮತ್ತಷ್ಟು ಕಳೆಗುಂದಿದೆ.
ಬೀದರ್ನಲ್ಲಿ ಚುನಾವಣೆಗೆ ನಿಂತು ಗೆದ್ದು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ಗೆ ತೋರಿಸುವುದಾಗಿ ನಾಗಮಾರಪಲ್ಲಿ ಸವಾಲೆಸೆದಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ಮೀಸಲು ಕ್ಷೇತ್ರದಿಂದ ಗುರುಪಾದಪ್ಪ ನಾಲ್ಕು ಬಾರಿ ಪ್ರತಿನಿಧಿಸಿದ್ದರು. ಕ್ಷೇತ್ರ ಪುನರ್ ವಿಂಗಡಣೆಯಿಂದ ಔರಾದ್ ಮೀಸಲು ಕ್ಷೇತ್ರವಾಗಿ ಬದಲಾಯಿತು. ಈ ಕಾರಣದಿಂದ ಅವರು ಬೀದರ್ ನಗರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿದ್ದರು. ಆದರೆ ಈ ಕ್ಷೇತ್ರದಿಂದ ರಹೀಮ್ಖಾನ್ ಎಂಬುವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ಇದರಿಂದ ಬೇಸರಗೊಂಡಿರುವ ಅವರು ರಾಜೀನಾಮೆ ನೀಡಿ ಕಾಂಗ್ರೆಸ್ನಿಂದ ಹೊರಬಂದಿದ್ದಾರೆ. ಗುರುಪಾದಪ್ಪ ಜೆಡಿ(ಎಸ್) ಪಕ್ಷ ಸೇರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
(ದಟ್ಸ್ಕನ್ನಡ ವಾರ್ತೆ)