'ಸ್ವಾಭಿಮಾನಿ' ಕನ್ನಡ ಸರ್ಕಾರ ಸ್ಥಾಪನೆ: ಚಂಪಾ
ಬೆಂಗಳೂರು,ಏ.26:ರಾಜ್ಯದಲ್ಲಿ ಎಲ್ಲಡೆ ಕನ್ನಡಕ್ಕೆ ಪರಮೊಚ್ಛ ಸ್ಥಾನ ಸಿಗಬೇಕು, ಕರ್ನಾಟಕದಲ್ಲಿ ಕನ್ನಡ ಸರ್ಕಾರ ಆಗಬೇಕು ಎನ್ನುವುದು ತಮ್ಮ ಗುರಿ ಎಂದು ಸ್ವಾಭಿಮಾನಿ ಕನ್ನಡ ಪಕ್ಷದ ಅಧ್ಯಕ್ಷ ಪ್ರೊ.ಚಂದ್ರಶೇಖರ್ ಪಾಟೀಲ್ ಹೇಳಿದರು.
ತಮ್ಮ ಪಕ್ಷದ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ನಂತರ ಮಾತನಾಡಿದ ಅವರು, ತಾವು ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದರು. ಭಾರತ ಗಣತಂತ್ರವಾದದ ಒಂದು ರಾಜ್ಯವಾಗಿ ಕರ್ನಾಟಕವು ಉಳಿದ ರಾಜ್ಯಗಳಿಗೆ ಸಮಾನವಾಗಿ ಘನತೆಯಿಂದ ಬಾಳುವಂತಾಗಬೇಕು. ಭಾಷಾವಾರು ಪ್ರಾಂತ್ಯ ರಚನೆ ಸಿದ್ಧಾಂತಕ್ಕೆ ರಾಜ್ಯದ ಬದುಕಿನ ಎಲ್ಲ ವಲಯಗಳು ರೂಪುಗೊಳ್ಳಬೇಕು ಎನ್ನುವುದು ತಮ್ಮ ಉದ್ದೇಶವಾಗಿದೆ ಎಂದರು.
ವಲಸೆ, ಶಿಕ್ಷಣ, ನೀರು ಹಂಚಿಕೆ, ಗಡಿಭಾಗ ಮುಂತಾದ ರಾಷ್ಟ್ರೀಯ ವಿಷಯಗಳಲ್ಲಿ ರಾಷ್ಟ್ರೀಯ ನೀತಿ ರೂಪಗೊಳ್ಳಬೇಕು. ಆ ನಿಟ್ಟಿನಲ್ಲಿ ತಾವು ಶ್ರಮಿಸುವುದಾಗಿ ಭರವಸೆ ನೀಡಿದರು.ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಪ್ರತಿಯೊಂದು ಮತಕ್ಷೇತ್ರಗಳಿಗೆ ತಿಂಗಳಿಗೆ ಎರಡು ಬಾರಿಯಾದರೂ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಅಧ್ಯಯನ ನಡೆಸುತ್ತಿದೆ. ಅದನ್ನು ಶೀಘ್ರದಲ್ಲಿ ಎಲ್ಲೆಲ್ಲಿ ಏನೇನು ಅಭಿವೃದ್ಧಿ ಕೆಲಸ ಹಮ್ಮಿಕೊಳ್ಳಲಾಗಿದೆ. ಹಾಗೆಯೇ ತಿಂಗಳ ವರದಿಯನ್ನು ಜನರ ಮುಂದೆ ಇಡಲಾಗುತ್ತಿದೆ ಎಂದು ಚಂಪಾ ಸ್ಪಷ್ಟಪಡಿಸಿದರು.
ಇನ್ನುಳಿದ ಅಭ್ಯರ್ಥಿಗಳು ವಕೀಲ ಎಂ.ಕೆ.ವಿಜಯಕುಮಾರ್(ರಾಜಾಜಿನಗರ) ಮತ್ತು ಕುಮಾರಸ್ವಾಮಿ ಸಂಡೂರು ಸರ್ವಜ್ಞ ನಗರದಿಂದ ಚುನಾವಣೆ ಆಖಾಡಕ್ಕೆ ಇಳಿಯಲಿದ್ದಾರೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)