ಪ್ರಮೀಳಾ ಸಾಮ್ರಾಜ್ಯದಲ್ಲಿ ಮಂಡ್ಯದ ಗಂಡು ಕಣಕ್ಕೆ
ಶ್ರೀರಂಗಪಟ್ಟಣ,ಏ.23: ಮಂಡ್ಯ ಜಿಲ್ಲೆಯ ಇತಿಹಾಸ ಪ್ರಸಿದ್ಧ ಶ್ರೀರಂಗಪಟ್ಟಣ ಕ್ಷೇತ್ರದಿಂದ ನಟ ಅಂಬರೀಶ್ ಇಂದು ನಾಮಪತ್ರ ಸಲ್ಲಿಸಿ ಅಖಾಡಕ್ಕಿಳಿದರು. ಈ ಕ್ಷೇತ್ರದ ವಿಶೇಷ ಎಂದರೆ, ಪ್ರತಿಬಾರಿಯೂ ಇಲ್ಲಿ ಮಹಿಳೆಯರೇ ಮೇಲುಗೈ ಸಾಧಿಸುತ್ತಿದ್ದರು. ಪ್ರಮೀಳಾ ಸಾಮ್ರಾಜ್ಯದಲ್ಲಿ ಅಂಬಿ ಅಡಿಯಿಟ್ಟಿದ್ದಾರೆ.
ಇಂದು ಭಾರೀ ಅಭಿಮಾನಿಗಳ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ ಮಂಡ್ಯದ ಗಂಡು ಅಂಬರೀಷ, ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದರು. ಸುಮಾರು ಎಂಟು ವರ್ಷದಿಂದ ಸಂಸದನಾಗಿ ಪ್ರಮಾಣಿಕತೆಯಿಂದ ಈ ನೆಲೆದ ಸೇವೆ ಮಾಡಿದ್ದೇನೆ.ನೀವೆಲ್ಲ ಈ ಅಂಬರೀಷನನ್ನು ಹರಸಿ, ಮತ ನೀಡಿ ಆಶೀರ್ವದಿಸಿದ್ದಿರಿ, ಈಗ ಮತ್ತೆ ನಿಮ್ಮ ಮನೆ ಬಾಗಿಲಿಗೆ ಈ ಅಂಬರೀಷ ಬಂದಿದ್ದಾನೆ. ವಿಧಾನಸಭೆ ಆಖಾಡಕ್ಕೆ ಧುಮುಕಿರುವ ನನಗೆ ಮತ ನೀಡಿ ಗೆಲ್ಲಿಸಬೇಕೆಂದು ಜನರಲ್ಲಿ ಮನವಿ ಮಾಡಿಕೊಂಡರು.
ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅಂಬರೀಷ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ, ಅವರು ಬಿಜೆಪಿಗೆ ಸೇರಲಿದ್ದಾರೆ ಎನ್ನುವ ಗಾಳಿಸುದ್ದಿಗಳನ್ನು ಸ್ಪಷ್ಟವಾಗಿ ನಿರಾಕರಿಸಿರು. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಕಳೆದ ಎಂಟು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಸದನಾಗಿ ಕೆಲಸ ಮಾಡಿದ್ದೇನೆ. ಯಾವ ಸಂದರ್ಭದಲ್ಲಿಯೂ ನನ್ನ ಮನಸ್ಸಿನಲ್ಲಿ ಪಕ್ಷವನ್ನು ತೊರೆಯುವ ವಿಚಾರಗಳು ಬಂದಿಲ್ಲ ಎಂದರು.
ಹಾಗೆಯೇ ಈ ಸಲದ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಮತ ಹಾಕಿ, ಇದರಿಂದ ಜನರಿಗೆ ಒಳ್ಳೇಯದಾಗಲಿದೆ ಎಂದು ಭಿನ್ನವಿಸಿಕೊಂಡರು. ಶ್ರೀರಂಗಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಸಚಿವ ಶ್ರೀಕಂಠಯ್ಯ ಅವರ ಪುತ್ರ ರವೀಂದ್ರ ಶ್ರೀಕಂಠಯ್ಯ ಹೈಕಮಾಂಡ್ ಒತ್ತಡದಿಂದ ತಮ್ಮ ನಾಮಪತ್ರವನ್ನು ಹಿಂತೆದುಕೊಂಡಿದ್ದು, ಅಂಬರೀಷ್ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
(ದಟ್ಸ್ ಕನ್ನಡ ವಾರ್ತೆ)