ಕಾಂಗ್ರೆಸ್ನಲ್ಲಿ ಬಂಡಾಯದ ರಣ ಕಹಳೆ
ಬೆಂಗಳೂರು, ಏ.21: ನಟರಾದ ಜಗ್ಗೇಶ್ ಮತ್ತು ಅಂಬರೀಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತಾದರೂ ಮಂಡ್ಯ ಹಾಗೂ ತುಮಕೂರು ಜಿಲ್ಲೆಗಳ ಬಂಡಾಯ ಶಮನವಾಗಿಲ್ಲ. ಕುಣಿಗಲ್ನಿಂದ ಮುದ್ದು ಹನುಮೇಗೌಡ ಅವರಿಗೆ ಟಿಕೆಟ್ ನೀಡದಿರುವುದನ್ನು ತೀವ್ರವಾಗಿ ವಿರೋಧಿಸಿ ರಸ್ತೆ ತಡೆ ನಡೆಸಿ ಕಾಂಗ್ರೆಸ್ ನಾಯಕರನ್ನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಳ್ಳಲಾಯಿತು.
ಕಾಂಗ್ರೆಸ್ ಟಿಕೆಟ್ ಸಿಗದ ಜಿ.ಮಾದೇಗೌಡ, ಎ.ಆರ್.ಶಿವರಾಮೇಗೌಡ, ನರೇಂದ್ರಸ್ವಾಮಿ ಮುಂತಾದವರು ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಮಹದೇವಪುರ ಮತ್ತು ಸರ್ವಜ್ಞನಗರಗಳಲ್ಲೂ ಬಂಡಾಯದ ಬಾವುಟ ಹಾರಿದೆ. ರಾಜರಾಜೇಶ್ವರಿ ನಗರದಲ್ಲಿ ವಲಸೆ ಕಾಂಗ್ರೆಸ್ಸಿಗರಿಗೆ ಟಿಕೆಟ್ ನೀಡಲಾಗಿದೆ ಎಂದು ಹನುಮಂತರಾಯಪ್ಪ ಆರೋಪಿಸಿದ್ದಾರೆ. ಮಹಾಲಕ್ಷ್ಮಿಪುರ ಟಿಕೆಟ್ ವಂಚಿತ ಎಂ.ನಾಗರಾಜ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಬೆಂಗಳೂರು ಜಿಲ್ಲೆಯಲ್ಲಿ ಕುರುಬ ಸಮುದಾಯದ ಒಬ್ಬರಿಗೂ ಟಿಕೆಟ್ ನೀಡಿಲ್ಲ ಎಂದು ದೂರಿದ್ದಾರೆ.
ಒಟ್ಟಿನಲ್ಲಿ ಬಂಡಾಯದ ಬಾವುಟ ಬೀಸಿದ್ದ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟು ಸಮಾಧಾನ ಪಡಿಸಲಾಗಿದೆ. ಕಾಂಗ್ರೆಸ್ ಇಂದು ಮೊದಲ ಹಂತದ ಚುನಾವಣೆಗೆ 2ನೇ ಪಟ್ಟಿ ಬಿಡುಗಡೆ ಮಾಡಿದೆ. ವಿಜಯನಗರದಿಂದ ಎಂ.ಕೃಷ್ಣಪ್ಪ,ತುಮಕೂರು ಗ್ರಾಮಾಂತರದಿಂದ ರುದ್ರೇಶ್, ಹೆಬ್ಬಾಳದಿಂದ ಎಚ್. ಎಂ. ರೇವಣ್ಣ, ಶ್ರೀರಂಗಪಟ್ಟಣದಿಂದ ಅಂಬರೀಶ್ ಹಾಗೂ ತುರುವೇಕೆರೆಯಿಂದ ಜಗ್ಗೇಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಮಲ್ಲೇಶ್ವರಂ, ಹೆಬ್ಬಾಳ, ಶಿವಾಜಿನಗರ, ನೆಲಮಂಗಲ, ಜಯನಗರ ಕ್ಷೇತ್ರಗಳಲ್ಲಿ ಬಂಡಾಯ ತೀವ್ರಗೊಂಡಿದೆ.
(ದಟ್ಸ್ಕನ್ನಡ ವಾರ್ತೆ)