ಸಿದ್ದು ಅಸಮಾಧಾನ; ಕಾಂಗ್ರೆಸ್ ಪಟ್ಟಿ ಮತ್ತಷ್ಟು ವಿಳಂಬ
ನವದೆಹಲಿ,ಏ.19:ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ತಮ್ಮ ಬೆಂಬಲಿಗರನ್ನು ಕಡೆಗಣಿಸಿದ್ದಾರೆಂದು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಅಸಮಾಧಾನಗೊಂಡಿರುವುದು ಕಾಂಗ್ರೆಸ್ ಪಟ್ಟಿ ಪ್ರಕಟಣೆ ವಿಳಂಬವಾಗಲು ಕಾರಣವಾಗಿದೆ. ಸಿದ್ದರಾಮಯ್ಯ ಅವರು ಶನಿವಾರ ನವದೆಹಲಿಯಲ್ಲಿ ಪೃಥ್ವಿರಾಜ್ ಚವ್ಹಾಣ್ ಅವರನ್ನು ಭೇಟಿ ಮಾಡಿ ಎರಡು ಮೂರು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೆ ಮಾತುಕತೆ ಫಲಕಾರಿಯಾಗಿಲ್ಲ ಎನ್ನಲಾಗಿದೆ. ಕಾಂಗ್ರೆಸ್ನ ಹಿರಿಯ ನಾಯಕರು ಚರ್ಚೆಯಲ್ಲಿ ಭಾಗವಹಿಸಿದ್ದಾಗಿ ತಿಳಿದುಬಂದಿದೆ.
ತಮ್ಮ ಜೊತೆ ಕಾಂಗ್ರೆಸ್ ಸೇರಿದ ಎಂಟು ಮಾಜಿ ಶಾಸಕರು ಮತ್ತೆ ಕೆಲವರಿಗೆ ಟಿಕೆಟ್ ನೀಡಬೇಕೆಂದು ಸಿದ್ದು ಪಟ್ಟು ಹಿಡಿದಿದ್ದರು. ಇದಕ್ಕೆ ಹೈಕಮಾಂಡ್ ಪೂರಕವಾಗಿ ಸ್ಪಂದಿಸಲಿಲ್ಲ. ಸಹಜವಾಗಿ ಸಿದ್ದು ಮುನಿಸು ಕಾಂಗ್ರೆಸ್ ಹೈಕಮಾಂಡ್ ವಿರುದ್ಧತಿರುಗಿದೆ. ಶುಕ್ರವಾರ ಸಂಜೆಯ ವೇಳೆಗೆ ಮೊದಲ ಹಂತದ ಚುನಾವಣೆಗೆ 89 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಬೇಕಿತ್ತು. ತಮ್ಮ ಬೆಂಬಲಿಗರಾದ ಅಪ್ಪಣ್ಣ, ಎಚ್.ಎಂ.ರೇವಣ್ಣ, ಆರ್.ಕೃಷ್ಣಪ್ಪ, ನಾಗರಾಜ್ ಮತ್ತು ಶಂಕರ್ ಅವರಿಗೆ ಟಿಕೆಟ್ ನೀಡದಿರುವುದನ್ನು ಸಿದ್ದು ವಿರೋಧಿಸಿದ ಕಾರಣ ಪಟ್ಟಿ ಬಿಡುಗಡೆ ಕಾಣಲಿಲ್ಲ.
ಪಟ್ಟಿ ವಿಳಂಬವಾಗಲು ಮತ್ತೊಂದು ಕಾರಣ ಹೀಗಿದೆ, ಕಾಂಗ್ರೆಸ್ನ ಕೇಂದ್ರ ಚುನಾವಣಾ ಸಮಿತಿಗೆ ಎಐಸಿಸಿ(ಐ) ಪ್ರಧಾನ ಕಾರ್ಯದರ್ಶಿರಾಹುಲ್ ಗಾಂಧಿ ಪಟ್ಟಿ ಪ್ರಕಟಣೆಯನ್ನು ಮುಂದೂಡಲು ಸೂಚಿಸಿದ್ದಾರೆ. ಹಾಗಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ಮತ್ತಷ್ಟು ವಿಳಂಬವಾಗಲಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪೃಥ್ವಿರಾಜ್ ಚವ್ಹಾಣ್ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಏ.18ರ ಸಂಜೆ ಬಿಡುಗಡೆ ಮಾಡಬೇಕಿತ್ತು. ಆದರೆ ಉತ್ತರ ಪ್ರದೇಶದ ಬುಂದೇಲ್ಖಂಡ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯನ್ನು ಮುಂದೂಡಲು ಸೂಚಿಸಿದ ಕಾರಣ ಪಟ್ಟಿ ಪ್ರಕಟಣೆ ವಿಳಂಬವಾಗಲಿದೆ.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಭೈರೇಗೌಡ ಅವರು ರಾಹುಲ್ ಗಾಂಧಿ ಆಪ್ತ ಕಾರ್ಯದರ್ಶಿ ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ, ಪಟ್ಟಿಯಲ್ಲಿ ಯುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಡೆಗಣಿಸಲಾಗಿದೆ ಎಂದು ದೂರಿದ್ದಾರೆ. ಹಾಗಾಗಿ ಪಟ್ಟಿ ಪ್ರಕಟಣೆಯನ್ನು ಮುಂದೂಡುವಂತೆ ಕಾಂಗ್ರೆಸ್ ಹೈಕಮಾಂಡ್ರಲ್ಲಿ ರಾಹುಲ್ ವಿನಂತಿಸಿಕೊಂಡಿದ್ದಾರೆ. ಈ ಬಗ್ಗೆ ಚೌವ್ಹಾಣ್ ಅವರಿಗೂ ರಾಹುಲ್ ಸೂಚಿಸಿದ್ದಾರೆ ಎನ್ನಲಾಗಿದೆ. ಬುಂದೇಲ್ಖಂಡ್ನ ಪ್ರವಾಸದಲ್ಲಿರುವ ರಾಹುಲ್ ಹಿಂದಿರುಗುವರೆಗೂ ಪಟ್ಟಿ ಪ್ರಕಟವಾಗುವುದು ಅನುಮಾನವಾಗಿದೆ. ರಾಹುಲ್ ಶನಿವಾರ ರಾತ್ರಿ ಪ್ರವಾಸದಿಂದ ಹಿಂತಿರುಗಲಿದ್ದಾರೆ. ಇಂದು ರಾತ್ರಿ ಅಥವಾ ಭಾನುವಾರ ಬೆಳಗ್ಗೆ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಕಾಂಗ್ರೆಸ್ ಮೂಲಗಳ ಪ್ರಕಾರ ಏ.22ರಂದೇ ಪಟ್ಟಿ ಪ್ರಕಟವಾಗಲಿದೆ.
(ಏಜೆನ್ಸೀಸ್)