ರೆಡ್ಡಿ ಬ್ರದರ್ಸ್ರಿಂದ ಜೀವ ಬೆದರಿಕೆ : ಲಾಡ್ ಆರೋಪ
ಬಳ್ಳಾರಿ, ಏ.18 : ಬಳ್ಳಾರಿಯಲ್ಲಿ ಸುಡುಸುಡು ಬೇಸಿಗೆಯ ಜೊತೆ ಗಣಿ ಲಾರ್ಡ್ ಅನಿಲ್ ಲಾಡ್ ಮತ್ತು ಗಣಿ ಧಣಿಗಳಾದ ಜನಾರ್ಧನ ರೆಡ್ಡಿ ಹಾಗು ಶ್ರೀರಾಮುಲು ನಡುವೆ ರಾಜಕೀಯ ವೈಷಮ್ಯದ ಬೆಂಕಿ ಹೊತ್ತಿ ಉರಿಯುತ್ತಿದೆ.
ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿರುವ ಅನಿಲ್ ಲಾಡ್ ಅವರು ಕಾಂಗ್ರೆಸ್ ಟಿಕೆಟ್ ನಿಂದ ಚುನಾವಣೆಗೆ ನಿಲ್ಲಬಾರದು ಎಂದು ಶ್ರೀರಾಮುಲು ನೇರವಾಗಿ ಬೆದರಿಸಿದ್ದಾರೆ ಎಂದು ಲಾಡ್ ಆರೋಪಿಸಿದ್ದಾರೆ. ಇಲ್ಲೇ ಇರ್ತಿಯಾ ಇಲ್ಲ ಸಾಯ್ತಿಯಾ. ಚುನಾವಣೆಗೆ ನಿಂತರೆ ಒಂದು ನೀನಿರಬೇಕು ಇಲ್ಲ ನಾನಿರಬೇಕು ಎಂಬಂತಹ ಮಾತುಗಳನ್ನು ಶ್ರೀರಾಮುಲು ಆಡಿದ್ದಾರೆ. ಜನಾರ್ಧನ ರೆಡ್ಡಿ ಅವರ ಬೆಂಬಲಿಗರು ನಂತರ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಮೂರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅನಿಲ್ ಲಾಡ್ ಆರೋಪಿಸಿದ್ದಾರೆ. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದು, ಜೀವ ಬೆದರಿಕೆ ಇರುವುದರಿಂದ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ರೆಡ್ಡಿ ಬ್ರದರ್ಸ್ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರ ಯಾವುದೇ ಗೊಡ್ಡು ಬೆದರಿಕೆಗಳಿಗೆ ಬಗ್ಗುವುದಿಲ್ಲ. ಚುನಾವಣೆಗೆ ಕಾಂಗ್ರೆಸ್ ವತಿಯಿಂದ ನಿಂತೇ ನಿಲ್ಲುತ್ತೇನೆ ಎಂದು ಅನಿಲ್ ಲಾಡ್ ಸೆಡ್ಡು ಹೊಡೆದಿದ್ದಾರೆ.
ಬಳ್ಳಾರಿಯಿಂದ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಸಿಗದೆ ನಿರಾಶರಾಗಿ ಅನಿಲ್ ಲಾಡ್ ಅವರು ಇತ್ತೀಚೆಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ವತಿಯಿಂದ ಈಗ ಅವರು ಬಳ್ಳಾರಿಯಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇದು ಲಾಡ್ ಮತ್ತು ರೆಡ್ಡಿ ಬ್ರದರ್ಸ್ ನಡುವೆ ರಾಜಕೀಯ ವೈಷಮ್ಯಕ್ಕೆ ದಾರಿ ಮಾಡಿಕೊಟ್ಟಿದೆ.
ಆದರೆ, ಲಾಡ್ ಅವರ ಮನೆ ಮೇಲಾದ ದಾಳಿಗೂ ತಮಗೂ ಯಾವುದೇ ಸಂಬಂಧವಿಲ್ಲವೆಂದು ರೆಡ್ಡಿ ಬ್ರದರ್ಸ್ ಹೇಳಿದ್ದಾರೆ. ತಮ್ಮ ಮೇಲೆ ಆರೋಪ ಹೊರಿಸಲೆಂದೇ ತಮ್ಮ ವಾಹನಗಳಿಗೆ ತಾವೇ ಬೆಂಕಿ ಹಚ್ಚಿಕೊಂಡಿದ್ದಾರೆ. ತಮಗೆ ಕೆಟ್ಟ ಹೆಸರು ಬರಲೆಂದು ಕಾಂಗ್ರೆಸ್ ನಾಯಕರು ಮಾಡಿರುವ ಕುತಂತ್ರ ಎಂದು ಜನಾರ್ಧನ ರೆಡ್ಡಿ ಆರೋಪಿಸಿದ್ದಾರೆ. ಶ್ರೀರಾಮುಲು ಕೂಡ, ಲಾಡ್ ಅವರ ಆರೋಪ ಸತ್ಯಕ್ಕೆ ದೂರವಾದುದು. ಲಾಡ್ ಅವರಿಗೆ ಯಾವುದೇ ಬೆದರಿಕೆ ಹಾಕಿಲ್ಲ ಎಂದು ಹೇಳಿದ್ದಾರೆ.
(ದಟ್ಸ್ಕನ್ನಡ ವಾರ್ತೆ)