ಕಾಂಗ್ರೆಸ್ನೊಂದಿಗೆ ಬಂಗಾರಪ್ಪ ಚುನಾವಣೆ ಮೈತ್ರಿ?
ಬೆಂಗಳೂರು,ಏ.17: ಅಧಿಕಾರಕ್ಕೆ ರಾಜಕಾರಣಿಗಳು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲರು ಎನ್ನುವುದಕ್ಕೆ ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳು ಸಾಕ್ಷಿಯಾಗಿವೆ. ಕಾಂಗ್ರೆಸ್ ನೀತಿಯನ್ನು ಪ್ರತಿಭಟಿಸಿ ಪಕ್ಷದ ನಾಯಕರಿಗೆ ಬಹಿರಂಗ ಸವಾಲು ಎಸೆದು ಹೊರಬಂದಿದ್ದ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಎಸ್.ಬಂಗಾರಪ್ಪ ಇದೀಗ ಮತ್ತೆ ಕಾಂಗ್ರೆಸ್ ಪಕ್ಷದೊಂದಿಗೆ ಚುನಾವಣೆ ಮೈತ್ರಿ ಮಾಡಿಕೊಳ್ಳಲು ಕಸರತ್ತು ನಡೆಸಿದ್ದಾರೆ.
ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳಲು ದೆಹಲಿಯಲ್ಲಿ ಬೀಡುಬಿಟ್ಟಿರುವ ಬಂಗಾರಪ್ಪ, ಸಮಾಜವಾದಿ ಪಕ್ಷಕ್ಕೆ 15 ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಹೊಂದಾಣಿಕೆ ಕುರಿತು ಉಭಯ ಪಕ್ಷಗಳಲ್ಲಿ ಬಿರುಸಿನ ವಿದ್ಯಮಾನಗಳು ನಡೆಯುತ್ತಿದ್ದು ಹೊಂದಾಣಿಕೆ ನಂತರ ಎಷ್ಟು ಲಾಭವಾಗಲಿದೆ ಎನ್ನುವುದರಲ್ಲಿ ಮಗ್ನವಾಗಿವೆ. ಈ ಮೈತ್ರಿ ಮುಂದಿನ ಲೋಕಸಭೆ ಚುನಾವಣೆಗೂ ಕೂಡಾ ಲಾಭದಾಯಕವಾಗಲಿದೆ ಎನ್ನುವುದು ಉಭಯ ಪಕ್ಷಗಳ ಲೆಕ್ಕಾಚಾರ. ಶೀಘ್ರದಲ್ಲೇ ಬಂಗಾರಪ್ಪ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಜತೆಗೆ ಚುನಾವಣೆ ಹೊಂದಾಣಿಕೆ ಕುರಿತು ಪಕ್ಷದ ಹೈಕಮಾಂಡ್ ಇಲ್ಲಿಯವರೆಗೂ ರಾಜ್ಯ ಘಟಕದ ಅಭಿಪ್ರಾಯವನ್ನು ಕೇಳಿಲ್ಲ. ಆ ವಿಷಯ ಕುರಿತು ತಮಗೆ ಸ್ಪಷ್ಟ ಮಾಹಿತಿ ಇಲ್ಲ ಎಂದಿರುವ ಅವರು, ಹೈಕಮಾಂಡ್ ಯಾವ ನಿರ್ಧಾರ ಕೈಗೊಂಡರೂ ಅದಕ್ಕೆ ನಾವು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳುವ ಕುರಿತಂತೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿರುವ ಬಂಗಾರಪ್ಪ ಮಾತುಕತೆ ಫಲಪ್ರದವಾಗಿದೆ ಎನ್ನುವ ಸುಳಿವು ನೀಡಿದ್ದಾರೆ. ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳಲು ಸಮಾಜವಾದಿ ಪಕ್ಷ ಕೂಡಾ ಉತ್ಸುಕವಾಗಿದ್ದು, ಈ ಹೊಂದಾಣಿಕೆಯಿಂದ ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸಲು ಸಹಕಾರಿಯಾಗುತ್ತದೆ ಎಂದು ಈ ತೀರ್ಮಾನಕ್ಕೆ ಬರಲಾಗಿದೆ, ಜತೆಗೆ ಉತ್ತರ ಪ್ರದೇಶದಲ್ಲಿ ಮಾಯಾವತಿಯನ್ನು ಈ ಮೂಲಕ ಬಗ್ಗುಬಡಿಯುವ ತಂತ್ರಗಾರಿಕೆಯನ್ನು ಮುಲಾಯಂಸಿಂಗ್ ಯಾದವ್ ಅನುಸರಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
(ದಟ್ಸ್ ಕನ್ನಡ ವಾರ್ತೆ)