ಹೈಕಮಾಂಡ್ ಆದೇಶದ ಮೇರೆಗೆ ಮದ್ದೂರಿನಿಂದ ಕೃಷ್ಣ?
ಬೆಂಗಳೂರು,ಏ.15: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಂತೆ ಗೊಂದಲದಲ್ಲಿ ಸಿಲುಕಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಮ್ಮ ತವರು ಕ್ಷೇತ್ರವಾದ ಮದ್ದೂರಿನಿಂದ ಸ್ಪರ್ಧಿಸುತ್ತಾರೆ ಎನ್ನುವ ಸ್ಪಷ್ಟ ಸುಳಿವು ದೊರೆತಿದೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎಸ್.ಎಂ.ಕೃಷ್ಣ ಸ್ಪರ್ಧಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿಸಿರುವ ಹಿನ್ನಲೆಯಲ್ಲಿ ಚುನಾವಣಾ ರಣರಂಗಕ್ಕೆ ಪ್ರವೇಶಿಸುವುದು ಖಚಿತವಾದಂತಾಗಿದೆ.
ಮಹಾರಾಷ್ಟ್ರ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ ಸಕ್ರಿಯ ರಾಜಕಾರಣಕ್ಕೆ ಹಿಂತಿರುಗಿದ ಕೃಷ್ಣ ಅವರಿಗೆ ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೋ, ಬೇಡವೋ ಎಂಬ ಜಿಜ್ಞಾಸೆ ಉಂಟಾಗಿತ್ತು. ಅಲ್ಲದೇ ಈ ಸಂಬಂಧ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲವೂ ಉಂಟಾಗಿತ್ತು. ಆದರೆ ಈಗ ಹೈಕಮಾಂಡ್ ಕೃಷ್ಣ ಅವರನ್ನು ಮದ್ದೂರಿನಿಂದ ಸ್ಪರ್ಧಿಸಲು ಸೂಚನೆ ನೀಡಿರುವುದು ಕಾಂಗ್ರೆಸ್ ಮತದಾರ ಹುರುಪು ಇಮ್ಮಡಿಗೊಳಿಸಿದೆ.
ಕಳೆದ ಚುನಾವಣೆಯಲ್ಲಿ ಕೃಷ್ಣ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಕಾರಣಕ್ಕಾಗಿ ಸ್ವಕ್ಷೇತ್ರದಿಂದ ಪಲಾಯನ ಮಾಡಿದರು ಎಂಬ ಆರೋಪಕ್ಕೆ ಗುರಿಯಾಗಿದ್ದರು. ಆದಕ್ಕಾಗಿ ಈ ಬಾರಿ ಇದನ್ನೆಲ್ಲ ತೊಳೆದು ಹಾಕಲು ಮದ್ದೂರಿನಿಂದ ಸ್ಪರ್ಧಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಎಸ್.ಎಂ.ಕೃಷ್ಣ ಸೋಮವಾರ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಚುನಾವಣೆ ಕುರಿತಂತೆ ರೂಪಿಸಲಾಗಿರುವ ಸಮಗ್ರ ವರದಿಯ ವಿವರವನ್ನು ನೀಡಿದರು.ಹಾಗೂ ಸೋನಿಯಾ ಗಾಂಧಿ ಅವರನ್ನು ಚುನಾವಣೆ ಪ್ರಚಾರಕ್ಕೆ ಬರುವಂತೆ ಮನವಿ ಮಾಡಿಕೊಂಡರು. ಜತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯವರನ್ನು ಕರೆದುಕೊಂಡು ಬರುವಂತೆ ಕೂಡಾ ಕೃಷ್ಣ ಕೋರಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಕೃಷ್ಣ ಸ್ಪರ್ಧೆಯ ಕುರಿತಂತೆ ಸೂಚನೆ ನೀಡಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)