ಪ್ರಜಾಪ್ರಭುತ್ವ ತತ್ವಕ್ಕೆ ರಾಮನ ಆದರ್ಶ ಮಾರ್ಗದರ್ಶನ
ಹೊಸನಗರ (ಯುಗಾವತಾರ ವೇದಿಕೆ) : ರಾಮಾಯಣದ ಮೌಲ್ಯಗಳು ನಮ್ಮ ಜೀವನಕ್ಕೆ ದಾರಿದೀಪವಿದ್ದ ಹಾಗೆ ಪ್ರಜಾಪ್ರಭುತ್ವ ತತ್ವಗಳಿಗೆ ಶ್ರೀರಾಮನ ಕಾರ್ಯ ಮಾರ್ಗದರ್ಶಿಯಾಗಿರಬೇಕು ಎಂದು ಕೇಂದ್ರ ಯೋಜನಾ ಖಾತೆ ಮಾಜಿ ರಾಜ್ಯ ಸಚಿವ ಎಂ.ವಿ. ರಾಜಶೇಖರನ್ ಅಭಿಪ್ರಾಯಪಟ್ಟಿದ್ದಾರೆ.
ಶ್ರೀರಾಮಚಂದ್ರಾಪುರಮಠ ಆಯೋಜಿಸಿರುವ ಶ್ರೀರಾಮಸತ್ರ ಕಾರ್ಯಕ್ರಮದಲ್ಲಿ ಸೋಮವಾರ ಶ್ರೀರಾಮಾನುಗ್ರಹ ಪ್ರಶಸ್ತಿ ಸ್ವೀಕರಿಸಿ ನಂತರ ಅವರು ಮಾತನಾಡಿದರು.
ಸಾಮಾನ್ಯವಾದ ವ್ಯಕ್ತಿಗಳು ಸಹ ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಉತ್ತಮ ವ್ಯಕ್ತಿತ್ವದಿಂದ ಆದರ್ಶರಾಗಬಹುದು. ಮತ್ತು ತಾವು ಆಯ್ದುಕೊಂಡ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುವ ಮೂಲಕವೂ ಶ್ರೇಷ್ಠರೆನಿಸಿಕೊಳ್ಳಬಹುದು. ಅಂಥ ನೈತಿಕತೆ ರೂಢಿಸಿಕೊಳ್ಳಲು ಪ್ರತಿಯೊಬ್ಬರು ಯೋಚಿಸಬೇಕು. ರಾಮ ಯಾವುದೊ ಜಾತಿ-ಮತವನ್ನು ಬಿಂಬಿಸಿದವನಲ್ಲ, ಬದಲಾಗಿ ಸಾತ್ವಿಕ ಶಕ್ತಿಯನ್ನು ಬಿಂಬಿಸಿದವನು. ಪ್ರಸ್ತುತ ನಮ್ಮ ಸಂಘಟನೆಗೆ ಇಂಥ ಶಕ್ತಿಯ ಅಗತ್ಯವಿದೆ ಎಂದು ರಾಜಶೇಖರನ್ ಅಭಿಪ್ರಾಯಪಟ್ಟರು.
ಶ್ರೀರಾಮಾನುಗ್ರಹ ಪ್ರಶಸ್ತಿ ಪ್ರದಾನ ಮಾಡಿದ ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ರಾಜಕಾರಣ ಸಮುದ್ರ ಇದ್ದಂತೆ, ಇದರಲ್ಲಿ ತಿಮಿಂಗಲಗಳು ಇದೆ, ರತ್ನವೂ ಇದೆ. ಇಂದಿನ ಕಾಲಘಟ್ಟದಲ್ಲಿ ತಿಮಿಂಗಲಗಳ ಸಂಖ್ಯೆ ಹೆಚ್ಚುತ್ತಿರುವುದು ಬೇಸರದ ಸಂಗತಿ. ಇದನ್ನು ಬದಲಿಸಿ ಅಮೂಲ್ಯ ರತ್ನವನ್ನು ಹುಡುಕಿ ಬೆಳೆಸುವ ಕಾರ್ಯವನ್ನು ಸಮಾಜ ಮಾಡಬೇಕಿದೆ ಎಂದರು. ವಸುದಾ ಶರ್ಮ ಪ್ರಾರ್ಥಿಸಿ, ರಾಜು ಹೆಬ್ಬಾರ್ ಮತ್ತು ವೈದ್ಯ ಗಿರಿಧರ ಕಜೆ ನಿರೂಪಿಸಿದರು.
(ದಟ್ಸ್ಕನ್ನಡ ವಾರ್ತೆ)