ನಾಡು ನುಡಿಗಾಗಿ ಒಗ್ಗಟ್ಟಾಗಿ ಹೋರಾಡಲು ನಿಸಾರ್ ಕರೆ
ಬೆಂಗಳೂರು,ಏ.14: ಕನ್ನಡ ನಾಡು ನುಡಿಗೆ ಆಪತ್ತು ಉಂಟಾದರೆ ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹ್ಮದ್ ಕರೆಕೊಟ್ಟಿದ್ದಾರೆ.
ಬಸವನಗುಡಿಯ ಕಹಳೆ ಬಂಡಿ ಉದ್ಯಾನವನದಲ್ಲಿ ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಹಮ್ಮಿಕೊಂಡಿದ್ದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಹೋರಾಟಕ್ಕೆ ಶಿಷ್ಟರು, ಸುಶಿಕ್ಷಿತರ ಹಾಗೂ ಸಾಹಿತಿಗಳನ್ನು ಕರೆದ್ಯೊಯುವುದು ಅಗತ್ಯ ಎಂದು ಸಲಹೆ ನೀಡಿದರು.
ಕನ್ನಡದ ನೆಲ- ಜಲದ ಸಮಸ್ಯೆ ಉದ್ಭವಿಸಿದರೆ ಹೋರಾಟ ಬರೀ ಕನ್ನಡ ಸಂಘಟನೆಗಳು, ಸಾಹಿತಿಗಳಿಗೆ ಮಾತ್ರ ಸೀಮಿತವಾಗಬಾರದು ಪ್ರತಿಯೊಬ್ಬ ಕನ್ನಡಿಗರು ಒಟ್ಟಾಗಿ ಹೋರಾಟಕ್ಕೆ ಇಳಿಯಬೇಕು.ಕನ್ನಡಿಗರು ಸಿಡಿದೇಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಿದೆ. ಕನ್ನಡಪರ ಸಂಘಟನೆಗಳು ಹೋರಾಟದ ಜತೆಗೆ ಜನ ಸಾಮಾನ್ಯರನ್ನು ಬಡಿದೆಬ್ಬಿಸುವ ಕೆಲಸವನ್ನು ಮಾಡಬೇಕಿದೆ ಎಂದು ನಿಸಾರ್ ಅಹಮದ್ ಹೇಳಿದರು.
ಕೊಳದ ಮಠದ ಶಾಂತವೀರ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿರುವ ಅನ್ಯ ಭಾಷೆಯ ಅಧಿಕಾರಿಗಳಿಗೆ ಕನ್ನಡ ಭಾಷೆಯ ಅರಿವಿಲ್ಲ, ಮೊದಲು ಕನ್ನಡ ಗೊತ್ತಿಲ್ಲದ ಅಧಿಕಾರಿಗಳಿಗೆ ಕನ್ನಡ ಕಲಿಸುವ ಕೆಲಸವಾಗಬೇಕಿದೆ ಎಂದರು. ಸಮ್ಮೇಳನದಲ್ಲಿ ಕವಿ ನಿಸಾರ್ ಅಹ್ಮದ್ ಹಾಗೂ ಸಮ್ಮೇಳನದ ಅಧ್ಯಕ್ಷ ಕೋಟೇಶ್ವರ್ ಸೂರ್ಯನಾರಾಯಣರಾವ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಡೊಳ್ಳು ಕುಣಿತದೊಂದಿಗೆ ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದ ಹಿರಿಯ ನಿರ್ದೇಶಕ ಡಾ.ಮಹೇಶ್ ಜೋಶಿ, ಬಸವನಗುಡಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಸಾವಿತ್ರಿ ವಿಜಯೇಂದ್ರ, ಗಾಯಕ ಸಿ.ಅಶ್ವತ್, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಾರ್ಶ್ವನಾಥ್, ಕೋಶಾಧ್ಯಕ್ಷ ಗುಡ್ಡದಹಳ್ಳಿ ಬಿ.ಕೃಷ್ಣಪ್ಪ, ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)