ಮಹಿಮಾ ಪಟೇಲರ ವಿಭಿನ್ನ ಚುನಾವಣೆ ಪ್ರಚಾರ
ಬೆಂಗಳೂರು,ಏ.14: ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ನಿರತವಾಗಿವೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸೀರೆ ಹಂಚುವಿಕೆ, ದುಡ್ಡಿನ ಆಮಿಷ ಒಡ್ಡುವುದು, ಹೆಂಡದ ಹೊಳೆ ಹರಿಸುವುದರಲ್ಲಿ ಮಗ್ನವಾಗಿವೆ. ಆದರೆ ಸುವರ್ಣಯುಗ ಪಕ್ಷ ಮಾತ್ರ ಸಮಾಜ ಶುದ್ಧಿಕರಿಸಿಲು ಚುನಾವಣೆ ಮುಗಿಯುವವರೆಗೂ ಉಪವಾಸ ವ್ರತ ಮಾಡುವುದರ ಮೂಲಕ ಪ್ರಚಾರ ಮಾಡುವುದಾಗಿ ಘೋಷಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸುವರ್ಣಯುಗ ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್, ನಮ್ಮ ಪಕ್ಷದ ಕಾರ್ಯವೈಖರಿಯೇ ಬೇರೆ ಎಂದು ಸ್ಪಷ್ಟಪಡಿಸಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಎಲ್ಲ ಪಕ್ಷಗಳಿಂದ ವಿವಿಧ ಆಮಿಷಗಳನ್ನು ಒಡ್ಡಿ ಮತದಾರರನ್ನು ಒಲಿಸಿ ಮತ ಗಿಟ್ಟಿಸಿಕೊಳ್ಳುತ್ತಾರೆ, ಆದರೆ ಸುವರ್ಣಯುಗ ಪಕ್ಷ ವಿಶಿಷ್ಟ ಪ್ರಚಾರಕ್ಕೆ ಕೈಹಾಕಿದೆ. ಸಮಾಜದ ಹಿತ ಕಾಯುವ ದೃಷ್ಟಿಯಿಂದ ಚುನಾವಣೆ ಮುಗಿಯುವವರೆಗೂ ಉಪವಾಸ ವ್ರತ ನಡೆಸುವುದಾಗಿ ಹೇಳಿದ್ದಾರೆ.
ಇದೇ ತಿಂಗಳ 28 ರಂದು ಚನ್ನಗಿರಿ ಕ್ಷೇತ್ರದಿಂದ ವಿಧಾನಸಭೆಗೆ ನಾಮಪತ್ರ ಸಲ್ಲಿಸಿ, ಅದೇ ದಿನ ಕ್ಷೇತ್ರದ ಸೂಳೆಕೆರೆ ದೇವಸ್ಥಾನದಲ್ಲಿ ಉಪವಾಸ ಆರಂಭಿಸುವುದಾಗಿ ಹೇಳಿದ್ದಾರೆ. ಮೇ 25ರ ವರೆಗೂ ಉಪವಾಸ ವ್ರತಾಚರಣೆ ಮುಂದುವರೆಯಲಿದೆ. ಉಪವಾಸದ 27 ದಿನಗಳಲ್ಲಿ 12 ದಿನ ನೀರು, ಜೇನು ತುಪ್ಪ, ನಿಂಬೆರಸ, ಎಳೆನೀರು ಹಾಗೂ ಉಳಿದ ದಿನ ಮಜ್ಜಿಗೆಯನ್ನು ಸೇವಿಸುವುದಾಗಿ ಅವರು ತಿಳಿಸಿದ್ದಾರೆ.
ಸುವರ್ಣಯುಗ ಪಕ್ಷಕ್ಕೆ ಮೆಕ್ಕೆ ಜೋಳ ಚಿಹ್ನೆ ನೀಡುವಂತೆ ಚುನಾವಣಾ ಆಯೋಗವನ್ನು ಕೋರಲಾಗಿದೆ ಎಂದ ಮಹಿಮಾ ಪಟೇಲ್, ನಮ್ಮ ಪಕ್ಷದ ಎಲ್ಲ ಅಭ್ಯರ್ಥಿಗಳು ಮೆಕ್ಕೆಜೋಳ ಚಿಹ್ನೆ ಮೂಲಕ ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು. ಹಾಗೂ ಬೇರೆ ಪಕ್ಷಗಳೂಂದಿಗೆಮೈತ್ರಿ ಮಾಡಿಕೊಂಡಿರುವುದನ್ನು ಅವರು ನಿರಾಕರಿಸಿದರು.
ಜತೆಗೆ ಪಕ್ಷ ಪ್ರಣಾಳಿಕೆ ಹೊರತರುವುದಿಲ್ಲ ಎಂದಿರುವ ಅವರು, ಬೇರೆ ಪಕ್ಷಗಳಂತೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮತದಾರರಿಗೆ ನೊರೆಂಟು ಆಶ್ವಾಸನೆಗಳನ್ನುನೀಡಿ ಅವುಗಳನ್ನು ಜಾರಿಗೆ ತರದೇ ಜನರಿಗೆ ಮೋಸ ಮಾಡುತ್ತಿರುವುದು ಗೊತ್ತಿರುವುದರಿಂದ ಪ್ರಣಾಳಿಕೆ ಪ್ರಕ್ರಿಯೆಯನ್ನು ಕೈಬಿಡಲಾಗಿದೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)