ಚುನಾವಣಾ ಕಣದಲ್ಲಿ ಚಂಪಾರ ಸ್ವಾಭಿಮಾನಿ ಪಕ್ಷ
ಬೆಂಗಳೂರು, ಏ.14: ರಾಜ್ಯದ ಹಿತಾಸಕ್ತಿ ಸಂರಕ್ಷಿಸುವ ದೃಷ್ಟಿಯಿಂದ ಸ್ವಾಭಿಮಾನಿ ಕನ್ನಡ ಪಕ್ಷ ಬೆಂಗಳೂರಿನ 15 ವಿಧಾನಸಭೆ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದೆ ಎಂದು ಪಕ್ಷದ ಅಧ್ಯಕ್ಷ ಪ್ರೊ.ಚಂದ್ರಶೇಖರ್ ಪಾಟೀಲ್ ಸೋಮವಾರ ತಿಳಿಸಿದ್ದಾರೆ.
ಈ ಹಿಂದೆ ಅಧಿಕಾರದ ಗದ್ದುಗೆ ಏರಿದ ರಾಷ್ಟ್ರೀಯ ಪಕ್ಷಗಳು ರಾಜ್ಯದ ನೆಲ,ಜಲ,ಭಾಷೆ, ಸಂಸ್ಕೃತಿ, ಪ್ರಾದೇಶಿಕತೆ ಕಾಪಾಡುವಲ್ಲಿ ವಿಫಲವಾಗಿವೆ. ಈ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷಗಳ ಅಗತ್ಯವಿದೆ. ಸ್ವಾಭಿಮಾನಿ ಕನ್ನಡ ಪಕ್ಷವು ಈ ವಿಧಾನಸಭೆಯಲ್ಲಿ ಸ್ಪರ್ಧಿಸಲಿದೆ ಎಂದು ಚಂಪಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸ್ವಾಭಿಮಾನಿ ಕನ್ನಡ ಪಕ್ಷಕ್ಕೆ ರಾಜ್ಯದ ಎಲ್ಲಾ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಕನ್ನಡ ಚಳುವಳಿ ವಾಟಾಳ್ ಪಕ್ಷ, ಸರ್ವೋದಯ ಪಕ್ಷ ಬೆಂಬಲ ನೀಡಲಿವೆ. ಬೆಂಗಳೂರು ನಗರದ 28 ವಿಧಾನಸಭೆ ಕ್ಷೇತ್ರಗಳ ಪೈಕಿ15 ಕ್ಷೇತ್ರಗಳಿಂದ ಸ್ಪರ್ಧಿಸಲು ನಿರ್ಧರಿಸಿದೆ. ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಿಂದಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ತಾವು ಬೆಂಗಳೂರಿನ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಚಂಪಾ ತಿಳಿಸಿದರು.
ನಾಡು-ನುಡಿ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳಿಂದ ಯಾವುದೇ ಲಾಭವನ್ನು ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ. ಈ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆ. ರಾಜ್ಯದ ಹಿತದೃಷ್ಟಿ ಕಾಪಾಡಲು ಚುನಾವಣೆಗೆ ಧುಮುಕುತ್ತಿರುವುದಾಗಿ ಪಕ್ಷದ ಸಂಚಾಲಕ ವಿವೇಕಾನಂದಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸ್ವಾಭಿಮಾನಿ ಪಕ್ಷದ ಖಾಜಾಂಚಿ ಮಲ್ಲಿಕಾರ್ಜುನ, ರಾಮಲಿಂಗಶೆಟ್ಟಿ, ಬಸಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
(ದಟ್ಸ್ಕನ್ನಡ ವಾರ್ತೆ)