ಮುರ್ಡೇಶ್ವರನಿಗೆ ಅತಿ ಎತ್ತರದ ಗೋಪುರ ಅರ್ಪಿತ
(ಚಿತ್ರ ಕೃಪೆ: ಯುಎನ್ ಐ)
ಕಾರವಾರ, ಏ.13: ವಿಶ್ವದ ಅತಿ ಎತ್ತರದ ರಾಜಗೋಪುರ ಎಂಬ ಕೀರ್ತಿಗೆ ಪಾತ್ರವಾಗಿರುವ ತಂಜಾವೂರಿನ ಬೃಹದೇಶ್ವರ ದೇಗುಲದ ರಾಜಗೋಪುರ(216 ಅಡಿ)ವನ್ನು ಮೀರಿಸಿ 'ಗೋಪುರಗಳ ರಾಜ' ಎಂಬ ಎಂಬ ಮನ್ನಣೆಗೆ ಮುರ್ಡೇಶ್ವರ ದೇಗುಲದ ಗೋಪುರ ಪಾತ್ರವಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಶನಿವಾರ ಈ ರಾಜಗೋಪುರವನ್ನು ಉದ್ಘಾಟಿಸಿದರು.
ಈ ರಾಜಗೋಪುರ ಸುಮಾರು 249 ಅಡಿ ಎತ್ತರವಿದ್ದು, 18 ಅಂತಸ್ತುಗಳಿವೆ. ಪ್ರವಾಸಿಗಳ ಅನುಕೂಲಕ್ಕಾಗಿ ಲಿಫ್ಟ್ ಸೌಲಭ್ಯವನ್ನು ಒದಗಿಸಲಾಗಿದೆ.ಮುರ್ಡೇಶ್ವರದ ಕಂದುಕಗಿರಿ ಶಿಖರದಲ್ಲಿ ವಿಶ್ವದಲ್ಲೇ ಅತಿ ಎತ್ತರ(123) ತಪೋಭಂಗಿಯಲ್ಲಿರುವ ಶಿವನ ಮೂರ್ತಿ, ಕಡಲತೀರ, ಶಿವನ ದೇಗುಲ ಭಕ್ತಾದಿಗಳು ಹಾಗೂ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಿದೆ.
10 ವರ್ಷಗಳ ಶ್ರಮದ ಫಲ: ಪ್ರಖ್ಯಾತ ಶಿಲ್ಪಿ ಕನ್ಯಾಕುಮಾರಿಯ ಎಸ್.ಕೆ. ಆಚಾರ್ಯ(ರಾಜಗೋಪುರದ ಮುಖ್ಯ ವಾಸ್ತು ಶಿಲ್ಪಿ) ಹಾಗೂ ಅವರ ಪುತ್ರ ಸ್ವಾಮಿನಾಥನ್ ಅವರು ಸುಮಾರು 10 ವರ್ಷಗಳ ಹಿಂದೆ ಈ ಬೃಹತ್ ಗೋಪುರ ನಿರ್ಮಾಣ ಕಾರ್ಯಕ್ಕೆ ಮುಂದಾದರು. ಸುಮಾರು 500 ಕ್ಕೂ ಹೆಚ್ಚು ನುರಿತ ಶಿಲ್ಪಿಗಳು, ತಂತ್ರಜ್ಞರು ಅವಿರತವಾಗಿ ದುಡಿದು ಉದ್ಯಮಿ ಆರ್. ಎನ್ .ಶೆಟ್ಟಿ ಅವರ ಕನಸನ್ನು ನನಸಾಗಿದ್ದಾರೆ.
ಉದ್ಘಾಟನಾ ಸಮಾರಂಭಕ್ಕೆ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ, ಚಿತ್ರಾಪುರ ಮಠದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ, ಲೋಕಾಯುಕ್ತ ಎನ್ .ಸಂತೋಷ್ ಹೆಗಡೆ, ಉದ್ಯಮಿ ಆರ್. ಎನ್ .ಶೆಟ್ಟಿ, ಬಿ.ಆರ್. ಶೆಟ್ಟಿ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪಕ ಟ್ರಸ್ಟಿ ಅದ್ಯಂತಾಯ ಅವರು ಆಗಮಿಸಿದ್ದರು.
(ದಟ್ಸ್ ಕನ್ನಡವಾರ್ತೆ)