ಕರ್ನಾಟಕದಲ್ಲಿ ಮತ್ತೊಮ್ಮೆ ಅತಂತ್ರ ವಿಧಾನಸಭೆ
ಬೆಂಗಳೂರು, ಏ.11: ಕರ್ನಾಟಕದಲ್ಲಿ ಮತ್ತೆ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬರಲಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ವರದಿ ಮಾಡಿದೆ. ಹೆಚ್ಚು ಕಡಿಮೆ 2004ರ ವಿಧಾನಸಭೆ ಫಲಿತಾಂಶ ಮರುಕಳಿಸಲಿದೆ ಎಂದು ಭವಿಷ್ಯವಾಣಿ ಹೇಳುತ್ತದೆ.
ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ಯಾವ ಪಕ್ಷವೂ ಬಹುಮತ ಪಡೆಯುವುದಿಲ್ಲ. ಯಾವುದೇ ಪಕ್ಷ ಮೂರಂಕಿಯ ಬಹುಮತ ಪಡೆಯುವುದು ಕಷ್ಟ ಎಂದು ವರದಿಯಲ್ಲಿ ಹೇಳಲಾಗಿದೆ. ಬಿಜೆಪಿ ಮೇಲೆ ಇದ್ದ ಅನುಕಂಪದ ಅಲೆ ಈಗ ತಣ್ಣಗಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂಸಂಸದ ಅನಂತ್ಕುಮಾರ್ ನಡುವಿನ ಮುಸುಕಿನ ಗುದ್ದಾಟ ಬಿಜೆಪಿಗೆ ಮಾರಕವಾಗಲಿದೆ. ಲಿಂಗಾಯಿತರ ಓಲೈಕೆಯಿಂದ ಒಕ್ಕಲಿಗ ಹಾಗೂ ಇತರೆ ಹಿಂದುಳಿದ ವರ್ಗಗಳ ಓಟ್ ಬ್ಯಾಂಕ್ ಕೈತಪ್ಪಲಿದೆ ಎನ್ನುತ್ತದೆ ವರದಿ.
ರಾಹುಲ್ ಪ್ರವಾಸದಿಂದ, ಎಸ್.ಎಂ.ಕೃಷ್ಣರ ಆಗಮನ,ಕೇಂದ್ರ ಸರ್ಕಾರದ ಸಾಲಮನ್ನಾದಂತಹ ರಾಜಕೀಯ ಚಟುವಟಿಕೆಗಳು ಕಾಂಗ್ರೆಸ್ ಪಕ್ಷದಲ್ಲಿ ಕೊಂಚ ಕೊಂಚ ಆಸೆ ಚಿಗುರಿಸುತ್ತಿದೆ. ಎಸ್.ಎಂ.ಕೃಷ್ಣ, ಸಿದ್ಧರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಸಿ.ಕೆ.ಜಾಫರ್ ಷರೀಪ್ ನಾಯಕತ್ವ ಎಲ್ಲ ವರ್ಗದ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳಲು ಒಂದು ವಿಧದಲ್ಲಿ ಸಹಕರಿಸಲಿದೆ. ಆದರೆ ಬಹುಮತ ಪಡೆಯುವ ಸಾಧ್ಯತೆಗಳು ಕಡಿಮೆ ಎಂದು ವರದಿ ಹೇಳುತ್ತದೆ.
ಇನ್ನ್ನು ಜೆಡಿ(ಎಸ್) ಪರಿಸ್ಥಿತಿ ಇದಕ್ಕಿಂತಲೂ ಭಿನ್ನವಾಗಿಲ್ಲ. ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಜೆಡಿ(ಎಸ್) ಅಭ್ಯರ್ಥಿಗಳು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿಮಾಜಿ ಪ್ರಧಾನಿ ದೇವೇಗೌಡರಿಗಿಂತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವರ್ಚಸ್ಸು ಅಧಿಕವಾಗಿದೆ. ಒಕ್ಕಲಿಗ ಮತ್ತು ಮುಸ್ಲಿಂ ಮತದಾರರಿಗೆ ಜೆಡಿ(ಎಸ್) ಮೇಲಿನ ಅಕ್ಕರೆ ಕಡಿಮೆಯಾಗಿಲ್ಲ. ಕುಮಾರಸ್ವಾಮಿ ಅವರ ಜನಪ್ರಿಯ ಆಡಳಿತ ಜೆಡಿ(ಎಸ್)ಗೆ ಶ್ರೀರಕ್ಷೆಯಾಗಿದೆ. ಆದರೂ ಆರಕ್ಕೆರದಮೂರಕ್ಕಿಳಿಯದ ಪರಿಸ್ಥಿತಿ ಜೆಡಿ(ಎಸ್)ದು ಎನ್ನುತ್ತದೆ ಗುಪ್ತಚರ ಇಲಾಖೆಯ ವರದಿ.
ಒಟ್ಟಾರೆಯಾಗಿ ಗುಪ್ತಚರ ಇಲಾಖೆ ಸಲ್ಲಿಸಿರುವ ವರದಿಯ ಪ್ರಕಾರ, ಕರ್ನಾಟಕ ವಿಧಾನಸಭೆ ಚುನಾವಣೆ-08ರಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯುವುದಿಲ್ಲ. ಕರ್ನಾಟಕದಲ್ಲಿ ಯಾವುದೇ ರಾಜಕೀಯ ಪಕ್ಷ 100ರ ಅಂಕಿ ದಾಟುವುದು ಅನುಮಾನ ಎಂದು ಹೇಳಲಾಗಿದೆ.
(ದಟ್ಸ್ಕನ್ನಡ ವಾರ್ತೆ)