ಜೇವರ್ಗಿಯಲ್ಲಿ ಘರ್ಷಣೆ; ಲಘು ಲಾಠಿ ಪ್ರಹಾರ
ಜೇವರ್ಗಿ, ಏ.8: ಗುಲ್ಬರ್ಗ ಜಿಲ್ಲೆಯ ಜೇವರ್ಗಿಯ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ದೇವಸ್ಥಾನದ ಆಭರಣಗಳನ್ನು ಕಳವು ಮಾಡಲಾಗಿದೆ. ಸುಮಾರು 12 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ಸೇರಿದಂತೆ ದೇವಾಲಯದ ಹುಂಡಿಯನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ದೇವಸ್ಥಾನದಲ್ಲಿ ಉಂಟಾದ ಕಳವಿನ ಸುದ್ದಿ ಮಂಗಳವಾರ ಬೆಳಗ್ಗೆ ಹರಡುತ್ತಿದ್ದಂತೆ ಸಾವಿರಾರು ಜನ ಭಕ್ತಾದಿಗಳು ಹಾಗೂ ಸಾರ್ವಜನಿಕರು ಲಕ್ಷ್ಮಿ ದೇವಸ್ಥಾನದ ಬಳಿ ಜಮಾಯಿಸಿದರು. ಸೂಕ್ತ ಭದ್ರತೆ ಒದಗಿಸದ ಪೊಲೀಸರು ಹಾಗೂ ದೇವಾಲಯ ಸಿಬ್ಬಂದಿಯ ನಿರ್ಲಕ್ಷ್ಯವೇ ಕಳವಿಗೆ ಕಾರಣ ಎಂದು ಆರೋಪಿಸಿ ಕೆಂಡಾಮಂಡಲವಾದರು. ಇದೇ ಸಮಯಕ್ಕೆ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಆಗ ಉದ್ರಿಕ್ತರ ಗುಂಪೊಂದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತು.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಅರಿತ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ನಂತರ ಜನರನ್ನು ಚದುರಿಸಲು ಅಶ್ರುವಾಯು ಸಿಡಿಸಲಾಯಿತು. ಜೇವರ್ಗಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಅಲ್ಲಿ ಅಘೋಷಿತ ಬಂದ್ ಜಾರಿಯಾಗಿದೆ. ಕಳ್ಳತನಕ್ಕೆ ಪೊಲೀಸರ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿಯನ್ನು ತಡೆದು ಸಾರ್ವಜನಿಕರು ಪ್ರತಿಭಟಿಸಿದರು.
(ದಟ್ಸ್ಕನ್ನಡ ವಾರ್ತೆ)