ರಾಜ್ಯಕ್ಕೆ ಚುನಾವಣೆ ಆಯೋಗದ ಉನ್ನತ ತಂಡ
ಬೆಂಗಳೂರು, ಏ.8: ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಗತಿ ಪರಿಶೀಲನೆಗಾಗಿ ಮೂರು ಉಪ ಚುನಾವಣೆ ಆಯುಕ್ತರನ್ನು ಒಳಗೊಂಡ ಕೇಂದ್ರ ಚುನಾವಣೆ ಆಯೋಗದ ಉನ್ನತ ತಂಡ ಮಂಗಳವಾರ ರಾಜ್ಯಕ್ಕೆ ಆಗಮಿಸಲಿದೆ.
ಮಂಗಳವಾರ ಕರ್ನಾಟಕಕ್ಕೆ ಆಗಮಿಸುವ ಚುನಾವಣೆ ಆಯೋಗದ ಉನ್ನತ ತಂಡ ಮೇ.10ರಂದು ನಡೆಯುವ ಮೊದಲ ಹಂತದ 89 ವಿಧಾನಸಭೆ ಕ್ಷೇತ್ರಗಳ ಜಿಲ್ಲಾವಾರುಪ್ರಗತಿ ಪರಿಶೀಲನೆಯನ್ನು ನಡೆಸಲಿದೆ. ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳ ಚುನಾವಣೆ ಅಧಿಕಾರಿಗಳು, ಪೊಲೀಸರು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡಲಿದೆ.
ಒಟ್ಟು 39,758 ಮತಗಟ್ಟೆಗಳನ್ನು ಸ್ಥಾಪಿಸಲು ಚುನಾವಣೆ ಆಯೋಗ ಉದ್ದೇಶಿಸಿದೆ. ಮತದಾರರಿಗೆ ಅನುಕೂಲವಾಗುವಂತೆ ಸಹಾಯಕ ಮತಗಟ್ಟೆಗಳನ್ನು ಸ್ಥಾಪಿಸುವ ಅಧಿಕಾರವನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕೊಡಲಾಗಿದೆ. ವಿಕಲಚೇತನರಿಗೆ ಅನುಕೂಲವಾಗುವಂತೆ ಮತಗಟ್ಟೆಗಳನ್ನು ನೆಲಮಾಳಿಗೆಯಲ್ಲಿ ಸ್ಥಾಪಿಸಬೇಕೆಂದು ಆದೇಶಿಸಲಾಗಿದೆ.
ಏ.4ರಂದು ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಸೇರಿದಂತೆ ಚುನಾವಣೆ ಆಯುಕ್ತರಾದ ಡಾ.ಎಸ್.ವೈ.ಖುರೇಶಿ, ನವೀನ್ ಚಾವ್ಲಾ ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿದ್ಯಾಶಂಕರ್ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚಿಸಿದ್ದರು.
(ದಟ್ಸ್ಕನ್ನಡ ವಾರ್ತೆ)