ಹೊಗೇನಕಲ್ಗೆ ಜಯ ಕರ್ನಾಟಕದ ಜಾಥಾ
ಬೆಂಗಳೂರು, ಏ.3: ತಮಿಳುನಾಡಿನ ಹೊಗೇನಕಲ್ ಜಲ ವಿವಾದವನ್ನು ಖಂಡಿಸಿ 'ಜಯ ಕರ್ನಾಟಕ ' ಸಂಘಟನೆಯ ಗೌರವಾಧ್ಯಕ್ಷ ಮುತ್ತಪ್ಪ ರೈ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಶುಕ್ರವಾರ ಹೊಗೇನಕಲ್ಗೆ ಹೊರಡಿತು.
ಶುಕ್ರವಾರ ಬೆಳಗ್ಗೆ 9ಗಂಟೆಗೆ ಕಾರ್ಪೊರೇಷನ್ ವೃತ್ತದ ಸಮೀಪ ಇರುವ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ನಡೆಸಿ ಸುಮಾರು 500 ವಾಹನಗಳಲ್ಲಿ 3 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು 'ಜಲ ಜಾಗೃತಿ-ಜನ ಜಾಗೃತಿ' ಜಾಥಾವನ್ನು ಆರಂಭಿಸಿದರು.
ಪ್ರತಿಭಟನಾ ಮೆರವಣಿಗೆಯು ಬಿಡದಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಮೈಸೂರು ಮುಖಾಂತರ ಹೊಗೇನಕಲ್ಗೆ ತೆರಳಿದೆ. ಏ.4ರಂದು ಮೈಸೂರಿನಲ್ಲಿ ತಂಗಿ ಏ.5ರಂದು ಹೊಗೇನಕಲ್ಗೆ ತೆರಳಿ ಅಲ್ಲಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಮುತ್ತಪ್ಪ ರೈ ಹೇಳಿದರು.
ಹೊಗೇನಕಲ್ ಜಲವಿವಾದ ಸಂಬಂಧ ಕರುಣಾನಿಧಿ ನೀಡಿರುವ ಹೇಳಿಕೆಯು ಕನ್ನಡಿಗರ ಆತ್ಮಾಭಿಮಾನಕ್ಕೆ ಧಕ್ಕೆ ಉಂಟು ಮಾಡಿದೆ. ಈ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಬೇಕು. ಪ್ರತಿಭಟನೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ಮುತ್ತಪ್ಪರೈ ತಿಳಿಸಿದರು.
(ದಟ್ಸ್ಕನ್ನಡ ವಾರ್ತೆ)