ರಾಜಧಾನಿಯಲ್ಲಿ ಹೊರನಾಡ ಕನ್ನಡಿಗರ ಬೆಳ್ಳಿಹಬ್ಬದ ಸಂಭ್ರಮ
ನವದೆಹಲಿ, ಏ.4 : ದೆಹಲಿ ಕನ್ನಡಿಗ ಮಾಸಪತ್ರಿಕೆ ನಡೆಸುತ್ತಿರುವ ಅಖಿಲ ಭಾರತ ಕನ್ನಡ ಸಮ್ಮೇಳನ 25ನೇ ವರ್ಷಕ್ಕೆ ಕಾಲಿಟ್ಟಿದೆ. ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಎರಡು ದಿನಗಳ ಕಾಲ ದೆಹಲಿಯಲ್ಲಿ ಏಪ್ರಿಲ್ 5ರಿಂದ ಆಚರಿಸಲಾಗುತ್ತಿದೆ. ಈ ಸಮ್ಮೇಳನವನ್ನು ಹಿರಿಯ ಗಾಂಧಿವಾದಿ ಹಾರ್ನಹಳ್ಳಿ ರಾಮಸ್ವಾಮಿ ಅವರು ಉದ್ಘಾಟಿಸಲಿದ್ದಾರೆ. ಸಿಂಡಿಕೇಟ್ ಬ್ಯಾಂಕ್ ಚೇರ್ಮನ್ ಕೆಕೆ ಪೈ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಜಕೀಯ ರಂಗದಲ್ಲಿ ಮಾಡಿದ ಜೀವಮಾನದ ಸಾಧನೆಗಾಗಿ ಕೇಂದ್ರ ಯೋಜನಾ ಖಾತೆ ರಾಜ್ಯ ಸಚಿವ ಎಂ.ವಿ.ರಾಜಶೇಖರನ್ ಅವರನ್ನು ಸನ್ಮಾನಿಸಲಾಗುತ್ತಿದೆ. ವಿಜಯಾ ಬ್ಯಾಂಕ್ ಚೇರ್ಮನ್ ಪ್ರಕಾಶ್ ಪಿ. ಮಲ್ಯ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮೋಹಿನಿ ವಿ. ಗಿರಿ ಅವರನ್ನೂ ಕ್ರಮವಾಗಿ 'ಅತ್ಯುತ್ತಮ ಬ್ಯಾಂಕರ್' ಮತ್ತು 'ಅತ್ಯುತ್ತಮ ಹೊರನಾಡ ಕನ್ನಡಿಗ' ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ರಾಷ್ಟ್ರದ ರಾಜಧಾನಿಯಲ್ಲಿ ಪರಿಚಯಿಸುವುದು ಈ ಸಮ್ಮೇಳನದ ಮೂಲ ಉದ್ದೇಶ ಎಂದು ದೆಹಲಿ ಕನ್ನಡಿಗ ಸಂಪಾದಕ ಎಂ.ಬಿ.ಸಾಮಗ ಹೇಳಿದ್ದಾರೆ.
(ಯುಎನ್ಐ)